ಶಿವಮೊಗ್ಗ: ಹೌದು. ಇಂತಹದೊಂದು ಸುವರ್ಣ ಅವಕಾಶ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲಭ್ಯವಿದ್ದು, ಅದಕ್ಕೆ ಸಂಬಳವು ಸಿಗಲಿದೆ.
ಪ್ರಾಣಿ, ಪಕ್ಷಿಗಳನ್ನು ಹೆದರಿಸುವ ಮತ್ತು ಪೂರಕ ಸೇವೆಗಳನ್ನು ಒದಗಿಸಲು ಏಜನ್ಸಿಗಳಿಗೆ ಶಿವಮೊಗ್ಗ ವಿಮಾನ ನಿಲ್ದಾಣ ನಿರ್ವಹಣೆ ಮಾಡುತ್ತಿರುವ ಕೆಎಸ್ಐಐಡಿಸಿ(ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ) ಟೆಂಡರ್ ಕರೆದಿದೆ. ಇದರ ನೋಟಿಫಿಕೇಷನ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಮಾನದ ಲ್ಯಾಂಡಿಂಗ್ ಮತ್ತು ಟೇಕಾಫ್ ಸಂದರ್ಭ ರನ್ ವೇ ಕ್ಲಿಯರ್ ಇರಬೇಕು. ಇದು ನಾಗರಿಕ ವಿಮಾನಯಾನ ನಿರ್ದೇಶನಾಲಯದ ನಿಯಮವಾಗಿದ್ದು ಲ್ಯಾಂಡಿಂಗ್ ಮತ್ತು ಟೇಕಾಫ್ ಸಂದರ್ಭ ಪ್ರಾಣಿ, ಪಕ್ಷಿಗಳು ರನ್ ವೇ ಮೇಲೆ ಅಥವಾ ಅದರ ಸಮೀಪ ಕಾಣಿಸಿಕೊಂಡರೆ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಹಕ್ಕಿಗಳು ವಿಮಾನಕ್ಕೆ ತಾಗಿ ಅಥವಾ ಇಂಜಿನ್ಗೆ ಸಿಲುಕುವ ಸಂಭವ ಇರುವ ಕಾರಣಕ್ಕೆ ವಿಮಾನ ನಿಲ್ದಾಣದ ಆವರಣದಲ್ಲಿ ಪ್ರಾಣಿ, ಪಕ್ಷಗಳನ್ನು ಬೆದರಿಸಬೇಕಾಗುತ್ತದೆ.
ಟರ್ಮಿನಲ್ ಕಟ್ಟಡದಲ್ಲಿ ಪಕ್ಷಿಗಳು ಗೂಡು ಕಟ್ಟಿ, ಹಿಕ್ಕೆ ಹಾಕಿದರೆ ನಿಲ್ದಾಣದ ಗೌರವಕ್ಕೆ ಧಕ್ಕೆ ಉಂಟಾಗಲಿದೆ. ಈ ಹಿನ್ನೆಲೆ ಟರ್ಮಿನಲ್ನಲ್ಲಿ ಹಕ್ಕಿಗಳು ಗೂಡು ಕಟ್ಟದ ಹಾಗೆ ನಿಯಂತ್ರಿಸುವುದು ಅನಿವಾರ್ಯ. ಇನ್ನು, ವಿಮಾನ ನಿಲ್ದಾಣದಲ್ಲಿ ದುಬಾರಿ ವೆಚ್ಚದ ಯಂತ್ರೋಪಕರಣ ಅಳವಡಿಸಲಾಗಿದೆ. ಪ್ರಾಣಿ, ಪಕ್ಷಿಗಳಿಂದ ಅವುಗಳನ್ನು ರಕ್ಷಿಸಬೇಕಾಗುತ್ತದೆ. ಅದಕ್ಕಾಗಿ ನುರಿತ ಸಿಬ್ಬಂದಿ ಅಗತ್ಯವಿರಲಿದೆ ಎನ್ನುತ್ತಾರೆ ಕೆಎಸ್ಐಐಡಿಸಿ ಅಧಿಕಾರಿಗಳು.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪ್ರಾಣಿ, ಪಕ್ಷಿಗಳನ್ನು ಬೆದರಿಸಲು ಸದ್ಯ 13 ಸಿಬ್ಬಂದಿ ಇದ್ದಾರೆ. ಆದರೆ ಇವರೆಲ್ಲ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತರಬೇತಿ ಪಡೆದವರು. ಅವರನ್ನು ತಾತ್ಕಾಲಿಕವಾಗಿ ಇಲ್ಲಿ ನೇಮಿಸಲಾಗಿದೆ. ಶಿವಮೊಗ್ಗಕ್ಕೆ ಪೂರ್ಣಾವಧಿ ಸಿಬ್ಬಂದಿ ಅಗತ್ಯವಿರುವ ಹಿನ್ನೆಲೆ ಏಜೆನ್ಸಿಗೆ ಟೆಂಡರ್ ಕರೆಯಲಾಗಿದೆ.