ಬೆಂಗಳೂರು: ಜೆಡಿಎಸ್ ಕೇರಳದಲ್ಲಿ ಎಲ್.ಡಿ.ಎಫ್. ಅನ್ನು ಬೆಂಬಲಿಸಲಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಜೆ.ಪಿ. ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೇರಳದ ಪರಿಸ್ಥಿತಿಯೇ ಬೇರೆ ಕರ್ನಾಟಕದ ಸ್ಥಿತಿಯೇ ಬೇರೆ. ಕೇರಳದಲ್ಲಿ ಜೆಡಿಎಸ್ ಹಿಂದಿನಿಂದಲೂ ಎಲ್.ಡಿ.ಎಫ್. ಬೆಂಬಲಿಸಿಕೊಂಡೇ ಬಂದಿದೆ. ಆ ರಾಜ್ಯದ ವಿಚಾರದಲ್ಲಿ ನಾವು ತೀರ್ಮಾನ ತೆಗೆದುಕೊಳ್ಳುವಾಗ ಅಲ್ಲಿನ ಪರಿಸ್ಥಿತಿಯನ್ನು ಅವಲೋಕನ ಮಾಡಬೇಕಾಗುತ್ತದೆ. ಕೇರಳದಲ್ಲಿ ಜೆಡಿಎಸ್ ಎಲ್.ಡಿ.ಎಫ್ ಗೇ ತನ್ನ ಬೆಂಬಲ ನೀಡಲಿದೆ ಎಂದರು.
ಕರ್ನಾಟಕದಲ್ಲಿ ಮಾತ್ರ ನಾವು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದೇವೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಸರಿಯಾದ ಮಾಹಿತಿ ಇಲ್ಲ. ಹಾಗಾಗಿ ಅವರು ದೇವೇಗೌಡರ ವಿರುದ್ಧ ಮಾತನಾಡಿದ್ದಾರೆ. ಕೇರಳದಲ್ಲಿ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಅಲ್ಲಿ ನಮ್ಮ ಪಕ್ಷ ಎಲ್.ಡಿ.ಎಫ್ ಅನ್ನೇ ಬೆಂಬಲಿಸಲಿದೆ ಎಂದು ಕುಮಾರಸ್ವಾಮಿ ತಿಳಿಸಿದರು.