More

    ನಿನ್ನೆ ಅವರದ್ದು, ಇಂದು ಇವರದ್ದು… ಇಬ್ರಾಹಿಂ ಉಚ್ಛಾಟನೆ ಪತ್ರ ವೈರಲ್

    ಬೆಂಗಳೂರು:
    ಜೆಡಿಎಸ್ ರಾಜ್ಯ ಘಟಕ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವ ಪತ್ರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
    ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸಹಿ ಮಾಡಿರುವ ಲೆಟರ್ ಹೆಡ್‌ನಲ್ಲಿ ಇಬ್ರಾಹಿಂ ಅವರನ್ನು ಉಚ್ಛಾಟನೆ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆ ನೀಡಲಾಗಿದೆ.
    ಒಂದು ದಿನದ ಹಿಂದೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಉಚ್ಛಾಟನೆ ಮಾಡಿದ ಪತ್ರ ವೈರಲ್ ಆದ ಮಾರನೇ ದಿನವೇ ದೇವೇಗೌಡರ ಹೆಸರಿನಲ್ಲಿ ಪತ್ರಿಕಾ ಪ್ರಕಟಣೆ ನೀಡಿರುವುದು ಕಾಕತಾಳೀಯ.
    ನಕಲಿ ಸಹಿ ಮಾಡಿ ಲೆಟರ್ ಹೆಡ್ ದುರುಪಯೋಗ ಮಾಡಿಕೊಂಡಿರುವ ಬಗ್ಗೆ ಇಬ್ರಾಹಿಂ ಪೊಲೀಸರಿಗೆ ದೂರು ನೀಡಿದ್ದಾರೆ. ದೇವೇಗೌಡರ ಸಹಿ ಮತ್ತು ಲೆಟರ್ ಹೆಡ್ ದುರುಪಯೋಗ ಆಗಿರುವ ಬಗ್ಗೆಯೂ ದೂರು ನೀಡಲಾಗುವುದು ಎಂದು ಜೆಡಿಎಸ್ ಮುಖಂಡರು ತಿಳಿಸಿದ್ದಾರೆ.

    ಇಬ್ರಾಹಿಂ ಉಚ್ಛಾಟನೆಗೆ ಒತ್ತಡ:
    ಜೆಡಿಎಸ್‌ನಲ್ಲಿ ಮೈತ್ರಿ ವಿಚಾರದಲ್ಲಿ ಗೊಂದಲ ಹಾಗೆಯೇ ಮುಂದುವರಿದಿದ್ದು, ಇಬ್ರಾಹಿಂ ಪ್ರತ್ಯೇಕ ಹಾದಿಯನ್ನೆ ಹಿಡಿದಿದ್ದಾರೆ. ಆದ್ದರಿಂದ ಅವರ ಮನವೊಲಿಕೆ ಮಾಡಿದರೂ ಪ್ರಯೋಜನವಾಗುವುದಿಲ್ಲ ಎನ್ನುವುದು ಹಲವು ಮುಖಂಡರ ಅಭಿಪ್ರಾಯವಾಗಿದೆ. ತೆರೆ ಮರೆಯಲ್ಲಿ ಇಬ್ರಾಹಿಂ ಅವರ ಉಚ್ಛಾಟನೆಗೂ ವೇದಿಕೆ ಸಜ್ಜುಗೊಳ್ಳುತ್ತಿದೆ.
    ನಾವಾಗಿಯೇ ಪಕ್ಷದಿಂದ ಉಚ್ಛಾಟನೆ ಮಾಡುವ ಬದಲು ಅವರಿಗೆ ಒಲವು ಇರುವ ಕಾಂಗ್ರೆಸ್‌ಗೆ ಇಬ್ರಾಹಿಂ ಸೇರಿಕೊಳ್ಳಲಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಟಾಂಗ್ ನೀಡಿದ್ದಾರೆ. ಇಬ್ರಾಹಿಂ ಮೇಲೆ ಒತ್ತಡ ತಂತ್ರವನ್ನು ಅನುಸರಿಸುತ್ತಿರುವ ಜೆಡಿಎಸ್ ಮುಖಂಡರು, ಅವರಾಗಿಯೇ ಆಚೆಗೆ ಹೋಗದೆ ಇದ್ದರೆ, ಉಚ್ಛಾಟನೆ ಮಾಡಿಸಲು ನಿರ್ಧರಿಸಿದ್ದಾರೆ.
    ಎಲ್ಲಾ ಬೆಳವಣಿಗೆ ಕಾದು ನೋಡುತ್ತಿರುವ ದೇವೇಗೌಡರು, ಈ ವಿಷಯದಲ್ಲಿ ಆತುರ ಮಾಡುವುದು ಸರಿಯಲ್ಲ. ಸಮಯ ಅವರಿಗೆ ಕೊಟ್ಟು ನೋಡೋಣ ಎಂದಷ್ಟೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts