ಚೆನ್ನೈ: ಇಲ್ಲಿನ ಪೋಯೆಸ್ ಗಾರ್ಡನ್ನಲ್ಲಿರುವ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾರ ‘ವೇದ ನಿಲಯಂ’ ನಿವಾಸವನ್ನು ಸ್ಮಾರಕವಾಗಿ ಪರಿವರ್ತಿಸಲಾಗಿದೆ. ಗುರುವಾರ ಮುಖ್ಯಮಂತ್ರಿ ಇ. ಪಳನಿಸ್ವಾಮಿ ಸಾಂಕೇತಿಕವಾಗಿ ಇದನ್ನು ಉದ್ಘಾಟಿಸಿದರು. ಇದಕ್ಕೂ ಮುನ್ನ, ಜಯಲಲಿತಾರ ಅಂತ್ಯಕ್ರಿಯೆ ನಡೆದ ಮರೀನಾ ಬೀಚ್ನಲ್ಲಿ ರೂ. 79 ಕೋಟಿ ವೆಚ್ಚದ ಫೀನಿಕ್ಸ್ ಆಕಾರದ ಸ್ಮಾರಕವನ್ನು ಬುಧವಾರ ಪಳನಿಸ್ವಾಮಿ ಉದ್ಘಾಟಿಸಿದ್ದರು. ಜಯಾರ ಆಪ್ತೆಯಾಗಿದ್ದ ವಿ. ಶಶಿಕಲಾ ಜೈಲಿನಿಂದ ಬಿಡುಗಡೆಯಾದ ಮರುದಿನ ಸ್ಮಾರಕ ಉದ್ಘಾಟನೆ ಆಗಿದೆ.
ಪೋಸ್ ಗಾರ್ಡನ್ ನಿವಾಸವನ್ನು ಸ್ಮಾರಕವಾಗಿ ಪರಿವರ್ತಿಸಿದ್ದಕ್ಕೆ ಕಾನೂನಿನ ಸಮ್ಮತಿ ಸಿಗಲಿದೆಯೇ ಇಲ್ಲವೇ ಎಂಬ ಅನಿಶ್ಚಯತೆಯ ನಡುವೆಯೂ ಅದನ್ನು ಉದ್ಘಾಟಿಸಲಾಗಿದೆ. ಮನೆಯೊಳಗೆ ಯಾರನ್ನೂ ಬಿಡಬಾರದು, ಆವರಣದ ಮುಖ್ಯ ದ್ವಾರಗಳನ್ನು ಮಾತ್ರ ತೆರೆಯಬೇಕೇ ಹೊರತು ಮನೆಯ ಬಾಗಿಲನ್ನು ತೆರೆಯುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಬುಧವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು. ಉದ್ಘಾಟನಾ ಸಮಾರಂಭ ನಡೆದ ನಂತರ ಕಟ್ಟಡದ ಕೀಲಿಕೈಗಳನ್ನು ಕೋರ್ಟ್ಗೆ ಒಪ್ಪಿಸುವಂತೆಯೂ ಸೂಚಿಸಿತ್ತು.
ಸುಗ್ರೀವಾಜ್ಞೆ
ತಮಿಳುನಾಡು ಸರ್ಕಾರ ಕಳೆದ ವರ್ಷ ಸುಗ್ರೀವಾಜ್ಞೆ ಮೂಲಕ ಜಯಾ ನಿವಾಸವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಕಾನೂನುಬದ್ಧ ವಾರಸುದಾರರಾದ ದೀಪಾ ಮತ್ತು ದೀಪಕ್, ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಗುರುವಾರ ಸಮಾರಂಭ ನಡೆಸಿದ ಮಾತ್ರಕ್ಕೆ ಈ ಆಸ್ತಿಯ ಮೇಲೆ ಸರ್ಕಾರದ ಹಕ್ಕು ಸ್ಥಾಪನೆಯಾಗುವುದಿಲ್ಲ ಅಥವಾ ರಿಟ್ ಅರ್ಜಿಗಳ ಇತ್ಯರ್ಥ ಬಾಕಿಯಿರುವಂತೆ ಅರ್ಜಿದಾರರ ಹಕ್ಕು ವಂಚನೆಯಾಗುವುದಿಲ್ಲ ಎಂದು ಕೋರ್ಟ್ ಬುಧವಾರ ಸ್ಪಷ್ಟಪಡಿಸಿದೆ.