ಬಳ್ಳಾರಿ: ಮಾಜಿ ಬಿಜೆಪಿ ನಾಯಕ ಜನಾರ್ದನ ರೆಡ್ಡಿ, ಚುನಾವಣೆ ಇನ್ನೇನು ಹತ್ತಿರದಲ್ಲಿರುವಾಗ ಹೊಸ ಪಕ್ಷದ ಘೋಷಣೆ ಮಾಡಿ ರಾಜಕೀಯ ಸಮೀಕರಣಗಳನ್ನು ಬದಲಿಸಿದ್ದು ಸುಳ್ಳಲ್ಲ.ಈಗಾಗಲೇ ರೆಡ್ಡಿ ಹಿಂಬಾಲಕರು ಕೆಲವರು ಬಿಜೆಪಿ ಬಿಟ್ಟು ಜನಾರ್ದನ ರೆಡ್ಡಿ ಘೋಷಿಸಿರುವ ಹೊಸ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದೀಗ ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಹುಟ್ಟುಹಬ್ಬದಂದು ಬೃಹತ್ ಸಮಾವೇಶ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಜನವರಿ 11 ರಂದು ಜನಾರ್ದನ ರೆಡ್ಡಿ ಅವರ ಜನ್ಮದಿನದ ಹಿನ್ನೆಲೆ ಬಳ್ಳಾರಿ ನಗರದಲ್ಲಿ ದೊಡ್ಡಮಟ್ಟದ ಸಮಾವೇಶ ಆಯೋಜಿಸಲಾಗಿದೆ ಎಂದು ಹೇಳಲಾಗುತ್ತಿದ್ದು ರೆಡ್ಡಿ ಬಳ್ಳಾರಿಗೆ ಬರುವುದಕ್ಕೆ ನಿರ್ಬಂಧ ಇದೆ. ಈ ಹಿನ್ನೆಲೆಯಲ್ಲಿ ಅವರ ಪತ್ನಿ ಅರುಣಾ ಲಕ್ಷ್ಮಿ ನೇತೃತ್ವದಲ್ಲಿ ಸಮಾವೇಶ ಜರುಗಲಿದೆ ಎಂದು ರಾಜಕೀಯ ಮೂಲಗಳಿಂದ ತಿಳಿದು ಬಂದಿದೆ.
ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಅರುಣಾ ಲಕ್ಷ್ಮಿ ಅವರು ಬಳ್ಳಾರಿ ನಗರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಅವರೇ ಕಾರ್ಯಕ್ರಮದ ಉಸ್ತುವಾರಿ ವಹಿಸಲಿದ್ದು, ಜನಾರ್ದನ ರೆಡ್ಡಿ ವರ್ಚುವಲ್ ಮೂಲಕ ಕಾರ್ಯಕ್ರಮ ಉದ್ದೇಶ ಕುರಿತು ಭಾಷಣ ಮಾಡಲಿದ್ದಾರೆ ಎಂದು ತಿಳಿದುಬಂದಿದೆ .