ಬಾಗಲಕೋಟೆ : ಹದಗೆಟ್ಟ ರಸ್ತೆ ಸಂಚಾರದಿಂದ ಸುಸ್ತಾದ ಲೋಕೋಪಯೋಗಿ ಇಲಾಖೆ ಸಚಿವ, ಡಿಸಿಎಂ ಗೋವಿಂದ ಕಾರಜೋಳ, ಚಿಕ್ಕಲಕಿ ಕ್ರಾಸ್-ತೊದಲಬಾಗಿ ರಸ್ತೆಯಲ್ಲಿ ಅವರ ವಾಹನ ನಿಲ್ಲಿಸಿ ಎಇಇ ಅವರನ್ನು ತರಾಟೆಗೆ ತೆಗೆದುಕೊಂಡರು.
ಜಮಖಂಡಿ ತಾಲೂಕಿನಲ್ಲಿ ಇನ್ಫೊಸಿಸ್ ಫೌಂಡೇಷನ್ ಸಂಸ್ಥಾಪಕಿ ಸುಧಾಮೂರ್ತಿ ಅವರ ಸರ್ಕಾರಿ ಶಾಲೆಗಳಿಗೆ ದೇಣಿಗೆ ನೀಡಿದ್ದ ಕಂಪ್ಯೂಟರ್ ವಿತರಣೆ ಕಾರ್ಯಕ್ರಮಕ್ಕೆ ಶಿಕ್ಷಣ ಸಚಿವ ಸುರೇಶ್ಕುಮಾರ್ ಜೊತೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಸಚಿವರಿಬ್ಬರು ರಸ್ತೆ ಮಾರ್ಗವಾಗಿ ತೆರಳುತ್ತಿದ್ದಾಗ ಜಮಖಂಡಿ ತಾಲೂಕಿನ ಚಿಕ್ಕಲಕಿ ಕ್ರಾಸ್-ತೊದಲಬಾಗಿ ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಸ್ವತಃ ಪಿಡಬ್ಲುೃಡಿ ಇಲಾಖೆ ಸಚಿವರಾದ ಗೋವಿಂದ ಕಾರಜೋಳ ಈ ರಸ್ತೆ ಸ್ಥಿತಿ ಕಂಡು ಅಧಿಕಾರಿಗಳ ವಿರುದ್ಧ ಗರಂ ಆದರು. ಮಾರ್ಗಮಧ್ಯಯೇ ವಾಹನ ನಿಲ್ಲಿಸಿ ಜಮಖಂಡಿ ಲೋಕೋಪಯೋಗಿ ಇಲಾಖೆ ಎಇಇ ಪಾಂಡುರಂಗ ಗಾಯಕವಾಡ ಮೇಲೆ ಸಿಟ್ಟು ಮಾಡಿದರು.
ನೋಡಿದ್ರಾ ಇಷ್ಟೊತ್ತು ಗಾಡಿ ಹೇಗೆ ಬಂತು? ನೀವೆಲ್ಲ ಬರೀ ಬೋಗಸ್ ವರದಿ ಕೊಡುತ್ತೀರಿ. ಈ ರಸ್ತೆ ಮರುನಿರ್ಮಾಣಕ್ಕೆ ಟೆಂಡರ್ ಮಾಡಿದ್ದೀರಾ? ಮೊದಲು ರಸ್ತೆ ದುರಸ್ತಿ ಮಾಡಿಸಿ, ನೆರೆಯಿಂದ ಹಾಳಾಗಿರುವ ರಸ್ತೆಯಲ್ಲಿ ಇದನ್ನು ಅಳವಡಿಸಿ ಕೆಲಸ ಮಾಡಬೇಕು. ಶೇ. 100 ರಷ್ಟು ಕೆಲಸ ಆಗಬೇಕು. ನಾ ಮತ್ತೆ ಬರುತ್ತೇನೆ ಎಂದು ಎಚ್ಚರಿಕೆ ನೀಡಿದರು.