ಕಂಪ್ಲಿ: ಪಟ್ಟಣದ ವರ್ತಕ ಜಯರಾಜ್ರ ಮೊಮ್ಮಗಳು ಓಸಿಕಾ ಗೊಲೇಚಾ ಜಿನ ಸನ್ಯಾಸ ದೀಕ್ಷೆ ಕೈಗೊಳ್ಳಲಿದ್ದು, ಮುಮುಕ್ಷು ದೀಕ್ಷಾರ್ಥಿಯ ಅಭಿನಂದನಾ ಮೆರವಣಿಗೆ ಶನಿವಾರ ನಡೆಯಿತು.
ಇದನ್ನೂ ಓದಿ: ಜೈನ ಧರ್ಮದಲ್ಲಿ ಮಹಿಳೆಯರಿಗಿದೆ ಉನ್ನತ ಸ್ಥಾನ
ಬಿಎಸ್ವಿ ಶಾಲೆಯಿಂದ ಆರಂಭಗೊಂಡು ಶ್ರೀಮುನಿ ಸುರತ್ ಜೈನ ಶ್ವೇತಾಂಬರ ಮಂದಿರದವರೆಗೆ ಮೆರವಣಿಗೆ ಜರುಗಿತು. ತಾಲೂಕಿನ ಸರ್ಕಾರಿ ಶಾಲಾ ಕಚೇರಿಗಳಿಗೆ ವಿತರಿಸಲು ಮಂದಿರದಲ್ಲಿ ಶಾಸಕ ಜೆ.ಎನ್.ಗಣೇಶ್ ಮಹಾವೀರ ಭಾವಚಿತ್ರಗಳನ್ನು ಬಿಡುಗಡೆಗೊಳಿಸಿದರು.
ಮುಮುಕ್ಷು ದೀಕ್ಷಾರ್ಥಿಯ ಅಭಿನಂದನಾ ಮೆರವಣಿಗೆ
ಜಯರಾಜ್ ಮತ್ತು ಪ್ರಕಾಶಿಬಾಯಿ ಪುತ್ರಿ ಕಲ್ಪನಾ ಸಿಂಘ್ವಿ 2017ರ ಏ.22ರಂದು ಕಲ್ಯಾಣಪ್ರಭಾಶ್ರೀಜಿಯಾಗಿ ಕಂಪ್ಲಿಯಲ್ಲಿ ಜಿನ ದೀಕ್ಷೆ ಪಡೆದುಕೊಂಡಿದ್ದರು. ಚಿಕ್ಕಮ್ಮಳಿಂದ ಪ್ರೇರಣೆ ಪಡೆದ ಓಸಿಕಾ ಗೋಲೇಚಾ ಜಿನ ದೀಕ್ಷೆಗೆ ಮುಂದಾಗಿದ್ದಾಳೆ.
ಓಸಿಕಾ ಸಿಕಿಂದರಾಬಾದಿನ ವರ್ತಕ ಭರತ್ಕುಮಾರ್ ಮೀನಾ ಗೊಲೇಚಾ ದಂಪತಿಗಳ ಒಬ್ಬಳೆ ಮಗಳಾಗಿದ್ದು, ತಪಸ್ಯಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಾಮರ್ಸ್ ಶಿಕ್ಷಣ ಪಡೆದಿದ್ದಾಳೆ. 20ರ ವಯೋಮಾನದ ಓಸಿಕಾ 2024ರ ಫೆ.29ರಂದು ಸಾಂಗ್ಲಿಯಲ್ಲಿ ಜಿನ ದೀಕ್ಷೆ ಕೈಗೊಳ್ಳಲಿದ್ದಾಳೆ ಎಂದು ಪ್ರಕಾಶಬಾಯಿ ತಿಳಿಸಿದರು.
ಜಿನ ಸಾದ್ವಿ ವಿಫುಲರೇಖಾ ಶ್ರೀಜಿ ಜತೆ ಏಳುಜನ ಸಾದ್ವಿಗಳು, ಶಾಸಕ ಜೆ.ಎನ್.ಗಣೇಶ್, ಪ್ರಮುಖರಾದ ರಾಮಲಾಲ್, ಶಾಂತಿಲಾಲ್ ಸಿಂಘ್ವಿ, ಕಮಲೇಶ್, ಮನೋಜ್, ಜೈನ ಶ್ವೇತಾಂಬರ ಸಂಘದ ಅಧ್ಯಕ್ಷ ಜವೇರಿಲಾಲ್ ಬಾಗ್ರೇಚಾ, ಪದಾಧಿಕಾರಿಗಳಾದ ಪಾರಸ್ಮಲ್ ಹುಂಡಿಯಾ, ಶಾಂತಿಲಾಲ್ ಬಾಲಾರ್, ಗೌತಮ್ಚಾಂದ್ ರಾಂಕಾ, ಫತೇಕುಮಾರ್ ಭಾಫ್ಣ ಇದ್ದರು.