ಜಗಳೂರು : ಇಲ್ಲಿನ ನಲಂದಾ ಪದವಿಪೂರ್ವ ಕಾಲೇಜಿನಲ್ಲಿ ಜವಾನನಾಗಿ ಬದುಕು ಕಟ್ಟಿಕೊಂಡಿದ್ದ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಈಗ ಜಗಳೂರು ಕ್ಷೇತ್ರದ ಶಾಸಕರಾಗಿದ್ದಾರೆ. ಆದರೂ ತಾವು ಸೇವೆ ಸಲ್ಲಿಸಿದ್ದ ಸಂಸ್ಥೆಯನ್ನು ಅವರು ಮರೆತಿಲ್ಲ. ಗುರುವಾರ ಅದೇ ಕಾಲೇಜಿಗೆ ತೆರಳಿ, ಈ ಹಿಂದಿನಂತೆ ಕಸ ಗುಡಿಸಿ, ಘಂಟೆ ಬಾರಿಸಿ ಕ್ಷೇತ್ರದ ಅಭಿವೃದ್ಧಿಗೆ ಚಾಲನೆ ನೀಡಿದರು.
ಬೆಳಗ್ಗೆ 9.40ಕ್ಕೆ ಕಾಲೇಜಿಗೆ ಆಗಮಿಸಿದ ಶಾಸಕರನ್ನು ವಿದ್ಯಾರ್ಥಿಗಳು ವಾದ್ಯಗಳ ಮೂಲಕ ಸ್ವಾಗತಿಸಿದರು. ನೇರವಾಗಿ ಪ್ರಾಚಾರ್ಯರ ಕೊಠಡಿಗೆ ತೆರಳಿ ಬೀಗ ತೆಗೆದು, ಹಾಜರಿ ಪುಸ್ತಕಕ್ಕೆ ಸಹಿ ಹಾಕಿದರು. ಬಳಿಕ ಸಂಸ್ಥಾಪಕ ವಿದ್ಯಾರತ್ನ ಡಾ.ತಿಪ್ಪೇಸ್ವಾಮಿ ಭಾವಚಿತ್ರಕ್ಕೆ ಕೈಮುಗಿದರು. ನಂತರ ಹೊರಗಿದ್ದ ಜವಾನನ ಕುರ್ಚಿಯಲ್ಲಿ ಕೆಲ ಹೊತ್ತು ಕುಳಿತರು. ಪೊರಕೆ ಹಿಡಿದು ಆವರಣದಲ್ಲಿನ ಕಸ ಗುಡಿಸಿದರು. 10 ಗಂಟೆಗೆ ಘಂಟೆ ಬಾರಿಸಿದ ಕೂಡಲೇ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ ಮೊಳಗಿತು.
ನಂತರ ಮಾತನಾಡಿದ ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ, ಹಸಿದಿದ್ದ ನನಗೆ ದೇವರ ರೂಪದಲ್ಲಿ ಬಂದ ವಿದ್ಯಾರತ್ನ ಡಾ.ಟಿ.ತಿಪ್ಪೇಸ್ವಾಮಿ ಕಾಲೇಜಿನಲ್ಲಿ ಜವಾನ ಕೆಲಸ ಕೊಟ್ಟು ಬದುಕು ರೂಪಿಸಿದರು. ಅವರು ಕೈಹಿಡಿಯದಿದ್ದರೆ ನಾನು ಶಾಸಕನಾಗುತ್ತಿರಲಿಲ್ಲ. ಹಾಗಾಗಿ, ಪಡೆದು ಮರೆಯಬಾರದು. ಮರೆತರೆ ಗುರುವಿಗೆ ವಂಚನೆ ಮಾಡಿದಂತೆ ಎಂದು ಸ್ಮರಿಸಿಕೊಂಡರು.
ಜವಾನನಾಗಿದ್ದ ನನ್ನನ್ನು ಕ್ಷೇತ್ರದ ಮತದಾರರು ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಅವರ ಋಣ ತೀರಿಸಲು ಶ್ರಮಿಸುತ್ತೇನೆ. ಸರ್ಕಾರದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವ ‘ಪೋಸ್ಟ್ಮ್ಯಾನ್’ನಂತೆ ಕೆಲಸ ಮಾಡುತ್ತೇನೆ ಎಂದರು.
ಸುಂದರವಾದ ಹಾರ ಆಗಬೇಕಾದರೆ ತೋಟದಲ್ಲಿ ಬಿಟ್ಟಿರುವ ವಿವಿಧ ಬಗೆಯ ಹೂವುಗಳನ್ನು ಸಂಗ್ರಹಿಸಬೇಕಾಗುತ್ತದೆ. ಅದರಂತೆ ಕ್ಷೇತ್ರದಲ್ಲಿ ಮಾಜಿ ಶಾಸಕರು, ಅಧಿಕಾರಿಗಳು, ಚಿಂತಕರ Drava ವಿದ್ಯಾರ್ಥಿಗಳು ಉತ್ತಮ ಸ್ಥಾನಗಳಲ್ಲಿದ್ದಾರೆ. ಆದರೆ, ಜವಾನನಾಗಿದ್ದ ದೇವೇಂದ್ರಪ್ಪ ಶಾಸಕರಾಗಿ ಆಯ್ಕೆಯಾಗಿರುವುದು ತುಂಬ ಸಂತಸ ತಂದಿದೆ ಎಂದರು.