ಮಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಹಾಗೂ ಅವರ ಪತ್ನಿ ಶನಿವಾರ ಕರೊನಾ ಸೋಂಕಿಗೊಳಗಾಗಿದ್ದು, ಫೇಸ್ಬುಕ್ ಪುಟದಲ್ಲಿ ಬಹಿರಂಗಪಡಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ದ.ಕ ಜಿಲ್ಲೆಗೆ ಶುಕ್ರವಾರ ಭೇಟಿ ನೀಡಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಮಾಜಿ ಸಚಿವರಾದ ರಮಾನಾಥ ರೈ, ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಸಕ ಜೆ.ಆರ್.ಲೋಬೊ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮತ್ತಿತರರ ಜತೆ ಬೆರೆತಿದ್ದರು. ಮಂಗಳೂರು ಬಿಷಪ್, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ನಿವಾಸಗಳಿಗೂ ಐವನ್ ಭೇಟಿ ನೀಡಿದ್ದರು. ಐವನ್ ಹತ್ತಿರವಿದ್ದ ಹಲವರು ಈಗ ಕ್ವಾರಂಟೈನ್ ಆಗುವಂತಾಗಿದೆ.
ಎರಡು ದಿನ ಹಿಂದೆ ಐವನ್ಗೆ ಮೈಕೈನೋವು, ಕೆಮ್ಮು ಕಾಣಿಸಿಕೊಂಡಿದ್ದು ಅನುಮಾನದಿಂದ ಖಾಸಗಿ ಆಸ್ಪತ್ರೆಯ ಲ್ಯಾಬ್ನಲ್ಲಿ ಗಂಟಲ ದ್ರವ ಪರೀಕ್ಷೆ ಮಾಡಿಸಿದ್ದರು. ನೆಗೆಟಿವ್ ಬಂದರೂ ವಿಶ್ರಾಂತಿ ಪಡೆದಿದ್ದರು. ಶುಕ್ರವಾರ ಕೆಪಿಸಿಸಿ ಅಧ್ಯಕ್ಷರು ಬಂದಿರುವ ಹಿನ್ನೆಲೆಯಲ್ಲಿ ಮನೆಯಲ್ಲಿ ಕುಳಿತುಕೊಳ್ಳುವುದು ಸರಿಯಲ್ಲ ಎಂದು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.
ಶನಿವಾರ ಬೆಳಗ್ಗೆ ಐವನ್ ಪತ್ನಿ(ವೈದ್ಯೆ)ಗೆ ಜ್ವರ ಕಾಣಿಸಿಕೊಂಡಿತ್ತು. ಹಾಗಾಗಿ ಪತ್ನಿಯೊಂದಿಗೆ ತೆರಳಿದ ಐವನ್ ತಮ್ಮಿಬ್ಬರ ಗಂಟಲ ದ್ರವ ಪರೀಕ್ಷೆ ಮಾಡಿಸಿದರು. ಸಂಜೆ ವೇಳೆಗೆ ಇಬ್ಬರಿಗೂ ಕರೊನಾ ಸೋಂಕು ತಗಲಿದ್ದು ದೃಢಪಟ್ಟಿದೆ.
‘ಪಾಟಿಸಿವ್ ಬಂದಿದೆ, ನಮಗೆ ಯಾವುದೇ ರೋಗ ಲಕ್ಷಣಗಳಿಲ್ಲ, ಆರೋಗ್ಯವಾಗಿದ್ದೇವೆ’ ಎಂದು ಐವನ್ ತಿಳಿಸಿದ್ದಾರೆ.
ನಿಯಮಾನುಸಾರ ಪ್ರಾಥಮಿಕ ಸಂಪರ್ಕ ಬಂದವರೆಲ್ಲ 14 ದಿನ ನಿಗಾವಣೆಯಲ್ಲಿ ಇರಬೇಕಾಗುತ್ತದೆ. ನಾಳೆಯಿಂದಲೇ ಅವರನ್ನು ಟ್ರೇಸ್ ಮಾಡುತ್ತೇವೆ. ಡಿಕೆಶಿಯವರ ತವರು ಜಿಲ್ಲೆಯ ಆಡಳಿತಕ್ಕೆ ಸೂಚನೆ ನೀಡಲಾಗುತ್ತದೆ.
– ಡಾ.ರಾಮಚಂದ್ರ ಬಾಯರಿ, ಜಿಲ್ಲಾ ಆರೋಗ್ಯಾಧಿಕಾರಿ, ದ.ಕ.