More

    ಡಿಸಿಎಂ ಶಿವಕುಮಾರ್ ಹೆಣ್ಣು ಮಗಳನ್ನು ಕಿಡ್ನಾಪ್ ಮಾಡಿ ಆಸ್ತಿ ಲಪಟಾಯಿಸಿರುವುದು ಸತ್ಯ

    ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೆಣ್ಣುಮಕ್ಕಳನ್ನು ಅಪಹರಿಸಿ ಅವರ ಅಪ್ಪ-ಅಮ್ಮನಿಂದ ಜಮೀನು ಲಪಟಾಯಿಸಿರುವುದು ನಿಜ. ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದರು.

    ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೆಣ್ಣು ಮಗಳನ್ನು ಕಿಡ್ನಾಪ್ ಮಾಡಿ, ಅವರ ಪೋಷಕರನ್ನು ಬೆದರಿಸಿ ಜಮೀನು ಬರೆಸಿಕೊಂಡಿದ್ದು ನಿಜ. ಇದು 1996-1997ರಲ್ಲಿ ನಡೆದ ಘಟನೆ. ನನ್ನ ಬಳಿ ಅದರ ದಾಖಲೆಗಳಿವೆ. ಒಂದು ಮಗುವನ್ನು ಕಿಡ್ನಾಪ್ ಮಾಡಿ ಏನು ಮಾಡಿದರು ಎನ್ನುವುದು ತಿಳಿದಿದೆ ಎಂದು ಕಿಡಿಕಾರಿದರು.

    ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿದ್ದ ಜಮೀನು ಬರೆಸಿಕೊಳ್ಳಲು ನೀವು ಏನೆಲ್ಲ ಮಾಡಿದರಿ ಎನ್ನುವ ಮಾಹಿತಿಯೂ ನನ್ನ ಬಳಿ ಇದೆ. ಭೂಮಿ ಖರೀದಿ ಮಾಡುತ್ತೇವೆ ಚೆಕ್ ಕೊಟ್ಟಿದ್ದೀರಿ. ಆಮೇಲೆ ನೀವು ಕೊಟ್ಟ ಚೆಕ್ ನಗದು ಆಗಿಲ್ಲ. ಈ ಬಗ್ಗೆಯೂ ದಾಖಲೆ ಇಟ್ಟಿದ್ದೇನೆ ಎಂದರು.

    ನನ್ನನ್ನು ಚರ್ಚೆಗೆ ಕರೆದಿದ್ದಾರೆ. ದಯಮಾಡಿ ಬನ್ನಿ ಚರ್ಚೆಗೆ, ನಾನೂ ಸಿದ್ದನಿದ್ದೇನೆ. ನಿಮ್ಮ ಬಗ್ಗೆ ಕಂತೆಗಟ್ಟಲೇ ದಾಖಲೆ ಇಟ್ಟಿದ್ದೇನೆ ಎಂದು ಸವಾಲು ಹಾಕಿದರು.

    ಶಾಂತಿನಗರ ಹೌಸಿಂಗ್ ಸೊಸೈಟಿಯನ್ನೇ ಡೂಪ್ಲಿಕೇಟ್ ಮಾಡಿ, ಡೂಪ್ಲಿಕೇಟ್ ಸೊಸೈಟಿಯನ್ನೇ ಒರಿಜಿನಲ್ ಮಾಡಿಕೊಳ್ಳಲಿಲ್ಲವೆ? ಈ ದೇಶದಲ್ಲಿನ ಸಂಸ್ಥೆಗಳನ್ನು ದುಡ್ಡಿನ ಮೂಲಕ ಕೊಂಡುಕೊಂಡು ಯಾವಾಗ ಏನು ಬೇಕಾದರೂ ಏನು ಬೇಕಾದರೂ ಮಾಡುವ ವ್ಯಕ್ತಿ ಡಿ.ಕೆ.ಶಿವಕುಮಾರ್ ಎಂದು ಕುಟುಕಿದರು.

    ನಾನು ಒಕ್ಕಲಿಗ ನಾಯಕತ್ವ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದೇನಾ? ನಾನು ರಾಜಕಾರಣದಲ್ಲಿ ನನ್ನ ಕೈಲಾದ ಮಟ್ಟಿಗೆ ಜಾತಿಯನ್ನು ಮೀರಿ ಜನರ ಸೇವೆ ಮಾಡುತ್ತಿದ್ದೇನೆ. ರಾಜ್ಯದ ನಾನಾ ಕಡೆಗಳಿಂದ ಜನರು ನನ್ನನ್ನು ಹುಡುಕಿಕೊಂಡು ಬರುತ್ತಾರೆ. ನನ್ನ ಕೈಲಾಗುವಷ್ಟನ್ನೇ ಮಾಡುತ್ತಿದ್ದೇನೆ ಎಂದು ತಿರುಗೇಟು ನೀಡಿದರು.

    ಶಿವಕುಮಾರ್ ಸತ್ಯ ಹರಿಶ್ಚಂದ್ರನ ಮೊಮ್ಮಗ. ದೊಡ್ಡಾಲಹಳ್ಳಿಯಲ್ಲಿ ಹುಟ್ಟುವಾಗ ಸತ್ಯ ಹರಿಶ್ಚಂದ್ರ ಬಂದು, ನೀನು ಸತ್ಯನೇ ನುಡಿಬೇಕು ಎಂದು ಹೇಳಿ ಹೋಗಿದ್ದಾರೆ. ನಮಗೆ ಸುಳ್ಳು ಹೇಳಿ ಎಂದು ಹೇಳಿದ್ದಾರೆ ಎಂದು ಟಾಂಗ್ ಕೊಟ್ಟರು.

    ಹೆತ್ತ ತಾಯಿ, ಪತ್ನಿ, ಮಗಳನ್ನೇ ನಂಬದ ಡಿಕೆಶಿ

    ನನ್ನ ಹೇಳಿಕೆ ಬಗ್ಗೆ ಹಾದಿಬೀದಿಯಲ್ಲಿ ಜಾಗಟೆ ಹೊಡೆಯುತ್ತಿರುವ ಶಿವಕುಮಾರ್ ತನ್ನ ಹೆತ್ತ ತಾಯಿಯನ್ನೇ ಅಪಮಾನಿಸಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿರುವ ಅವರು ಪ್ರತೀ ಕುಟುಂಬದಲ್ಲಿ ಹೆತ್ತ ತಾಯಿ, ಹೆಂಡತಿ, ಮಗಳ ಮೇಲೆ ಹೇಗೆ ಕಣ್ಣಿಟ್ಟಿರಬೇಕು ಎಂದು ಹೇಳಿದ್ದಾರೆ. ಮನೆಯಿಂದ ಹೊರಗೆ ಹೋಗಿ ಬರುವವರೆಗೂ ಅವರ ಮೇಲೆ ಕಣ್ಣಿಟ್ಟಿರಬೇಕು. ಅವರ ಚಟುವಟಿಕೆಗಳ ಮೇಲೆಯೂ ಕಣ್ಣಿಟ್ಟಿರಬೇಕು ಎಂದು ಹೇಳುತ್ತಾರೆ . ಇದು ಆ ವ್ಯಕ್ತಿಯ ಮಾನಸಿಕತೆ. ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎನ್ನುವುದನ್ನು ಇಂಥ ವ್ಯಕ್ತಿಯಿಂದ ಕಲಿಯಬೇಕೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

    ರಾಹುಲ್ ಗಾಂಧಿ ಅವರಿಗೆ ಸ್ವಾಗತ

    ಮಂಡ್ಯ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬರುತ್ತಿರುವ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸುತ್ತೇನೆ. ಅವರು ಪ್ರಚಾರಕ್ಕೆ ಬಂದರೆ ತಪ್ಪೇನು? ಬರುವವರನ್ನು ಬೇಡ ಎಂದು ಹೇಳುವುದಕ್ಕೆ ಆಗುತ್ತದೆಯೇ? ಬಂದು ಪ್ರಚಾರ ಮಾಡಲಿ, ಅದರಿಂದ ನನಗೇನೂ ನಷ್ಟ ಇಲ್ಲ ಎಂದು ಕುಮಾರಸ್ವಾಮಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts