More

    ವೇದನೆ, ಸಂವೇದನೆ ದಾಖಲಿಸಿಡಲು ಹೊರಟಿರುವುದು ದೊಡ್ಡ ಸಾಧನೆ

    ಶಿವಮೊಗ್ಗ: ಮನುಷ್ಯ ಸಂಬಂಧಗಳನ್ನು ಕಳೆದುಕೊಳ್ಳುವ ಕಾಲಘಟ್ಟದಲ್ಲಿದ್ದು ವೇದನೆ ಹಾಗೂ ಸಂವೇದನೆಗಳನ್ನು ದಾಖಲಿಸಿಡಲು ಹೊರಟಿರುವುದು ದೊಡ್ಡ ಸಾಧನೆ ಎಂದು ಕುವೆಂಪು ವಿಶ್ವವಿದ್ಯಾಲಯ ಕನ್ನಡ ವಿಭಾಗ ಪ್ರಾಧ್ಯಾಪಕ ಜಿ.ಪ್ರಶಾಂತ ನಾಯಕ ಹೇಳಿದರು.

    ಸಹ್ಯಾದ್ರಿ ಕಲಾ ಕಾಲೇಜು ಆವರಣದಲ್ಲಿ ಭಾನುವಾರ ಸಹ್ಯಾದ್ರಿ ಕಲಾ ಕಾಲೇಜು, ಗೀತಾಂಜಲಿ ಪ್ರಕಾಶನ, ಶಿಕಾರಿಪುರ ಸುವ್ವಿ ಪ್ರಕಾಶನ ವತಿಯಿಂದ ಉಪನ್ಯಾಸಕ, ಲೇಖಕ ಮೋಹನ ಚಂದ್ರಗುತ್ತಿ ಅವರ ಹಸೆ ಚಿತ್ತಾರ ಹಾಗೂ ಹೆಚ್ಚೆಯ ಶಿವಪ್ಪ ಮಾಸ್ತಾರ್ ಅವರ ಡೊಳ್ಳಿನ ಪದಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಮೊದಲ ಮಗುವಿಗೆ ಜನ್ಮ ನೀಡುವಾಗ ಒಬ್ಬ ತಾಯಿ ಅನುಭವಿಸುವ ನೋವು ಹಾಗೂ ಸಂಕಟದ ವೇದನೆಯನ್ನು ಪುಸ್ತಕ ಬರೆಯುವಾಗ ಲೇಖಕರು ಅನುಭವಿಸುತ್ತಾರೆ. ಪುಸ್ತಕಗಳ ಪ್ರಕಾಶಕರಲ್ಲಿ ಕೆಲವು ಸಮಸ್ಯೆಗಳು ಕಾಡುತ್ತಿದೆ. ಇಲ್ಲಿ ಪುಸ್ತಕ ಮಾರಾಟವಾಗಿಲ್ಲ ಎನ್ನುವುದು ಸಮಸ್ಯೆಯಲ್ಲ. ಆದರೆ, ಹೇಳಲು ಹೊರಟಿರುವ ವಿಚಾರಗಳಿಂದ ಜನರಿಗೆ ತಲುಪಲು ಸಾಧ್ಯವಾಗುತ್ತಿಲ್ಲ ಎನ್ನುವುದು ಸಮಸ್ಯೆಯಾಗಿದೆ ಎಂದರು.
    ಶಿವಪ್ಪ ಮಾಸ್ತಾರ್ ಅವರು ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗೆ ಅರ್ಹರು. ಆದರೆ, ಅಂದಿನ ಕಾಲಘಟ್ಟದಲ್ಲಿ ಸಮರ್ಪಕವಾದ ವೇದಿಕೆ ಸಿಗದೇ ಇರುವುದರಿಂದ ಸಾಧ್ಯವಾಗಲಿಲ್ಲ ಎಂದರು.
    ಜನಪದ ತಜ್ಞ ಡಾ. ಜಿ.ಸಣ್ಣಹನುಮಪ್ಪ ಮಾತನಾಡಿ, ಮೋಹನ್ ಚಂದ್ರಗುತ್ತಿ ಅವರು ದಾಖಲಿಸಿರುವ ಡೊಳ್ಳಿನ ಪದಗಳು ಶಿವಪ್ಪ ಮಾಸ್ತಾರರ ಸ್ವಂತ ರಚನೆ. ಡೊಳ್ಳು ಹಾಲು ಮತ ಸಮುದಾಯದ ಆರಾಧ್ಯ ದೈವ. ಇದನ್ನು ಮಲೆನಾಡಿನ ದೀವರು ಅತ್ಯಂತ ಪ್ರೀತಿಯಿಂದ ಗೌರವಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದ್ದಾರೆ ಎಂದರು.
    ಉಳ್ಳವರು ಹಾಗೂ ಮೇಲ್ವರ್ಗದ ಸಮುದಾಯಗಳಲ್ಲಿ ಜನಪದ ಪರಂಪರೆ ಕಾಣಲು ಸಾಧ್ಯವಿಲ್ಲ. ಇಡೀ ದೇಶದಲ್ಲಿ ಉಳ್ಳವರು ಶಿಷ್ಟ ಪರಂಪರೆ ಮಾತ್ರ ಗೌರವಿಸುವುದು. ಜನಪದ ಕಲೆ, ಸಂಸ್ಕ್ರತಿ ಶ್ರಮ ಜೀವಿಗಳಲ್ಲಿ ಮಾತ್ರ ಕಾಣಲು ಸಾಧ್ಯ. ದುಡಿಯುವ ವರ್ಗಗಳಲ್ಲಿ ಮಾತ್ರ ಅದ್ಬುತವಾದ ಜನಪದ ಸಂಪತ್ತು, ಸಿರಿವಂತಿಕೆ ಇರುತ್ತದೆ. ಈ ಆಯಾಮದಲ್ಲಿ ಶ್ರಮ ಜೀವಿಗಳಾಗಿ ರೇಣುಕಮ್ಮ ಹಾಗೂ ಶಿವಪ್ಪ ಮಾಸ್ತಾರ್ ಸೇರುತ್ತಾರೆ ಎಂದರು.
    ರೇಣುಕಮ್ಮ ಶಿವಪ್ಪ ಮಾಸ್ತಾರ್, ಸುಮಿತ್ರ ಮೋಹನ್ ಚಂದ್ರಗುತ್ತಿ, ಗೀತಾಂಜಲಿ ಪ್ರಕಾಶನದ ಜಿ.ಬಿ.ಟಿ.ಮೋಹನ್, ಸುವ್ವಿ ಪ್ರಕಾಶನದ ಬಿ.ಎನ್.ಸುನಿಲ್ ಕುಮಾರ್, ಅಣ್ಣಪ್ಪ ಮಳೀಮಠ, ಟಿ.ಶೃಂಗಶ್ರೀ ಉಪಸ್ಥಿತರಿದ್ದರು.

    ಹೆಚ್ಚೆಯ ಶಿವಪ್ಪ ಮಾಸ್ತಾರ್ ಹಾಡುಗಳ ಸಂಗ್ರಹ
    ಹೆಚ್ಚೆಯ ಶಿವಪ್ಪ ಮಾಸ್ತಾರ್ ಅವರ 40 ಡೊಳ್ಳಿನ ಹಾಡುಗಳ ಸಂಗ್ರಹ ಈ ಪುಸ್ತಕ ಒಳಗೊಂಡಿದೆ. ಅವರು, ಕೋಲಾಟ, ಲಾವಣಿ ಸೇರಿ ಸ್ವತಃ ಭಾಗವತರಾಗಿ 12ಕ್ಕೂ ಹೆಚ್ಚು ದೊಡ್ಡಾಟ ಹಾಗೂ ಸಣ್ಣಾಟಗಳ ಹಾಡುಗಳನ್ನು ಬರೆದು ಹಾಡಿದ್ದಾರೆ ಎಂದು ಉಪನ್ಯಾಸಕ, ಲೇಖಕ ಮೋಹನ ಚಂದ್ರಗುತ್ತಿ ಹೇಳಿದರು. ಮಾಸ್ತಾರ್ ಅವರಿಗೆ ಸ್ಥಳದಲ್ಲಿಯೇ ಜನಪದ ಹಾಡುಗಳನ್ನು ಕಟ್ಟಿ, ಹಾಡುವ ಶ್ರಮತೆ ಇತ್ತು. ಆದರೆ, ವಿಪರ್ಯಾಸವೆಂದರೆ ಮಾಸ್ತಾರ್ ಅವರು ಮುಖ್ಯ ವಾಹಿನಿಗೆ ಬರಲು ಯಾವುದೇ ವೇದಿಕೆ ಸಿಗಲಿಲ್ಲ. ಇದರಿಂದ, ಕೊನೆಯವರೆಗೆ ಶಾಪಗ್ರಸ್ಥ ಗಾಂಧರ್ವರಾಗಿ ಉಳಿದುಕೊಂಡರು ಎಂದು ಬೇಸರ ವ್ಯಕ್ತಪಡಿಸಿದರು. ಹಸೆ ಚಿತ್ತಾರ ಪುಸ್ತಕ ಬಿಡುಗಡೆಗೊಳಿಸಲು 2003ರಿಂದ ಹರಸಾಹಸ ಪಟ್ಟಿದ್ದು ಅನೇಕ ಸವಾಲುಗಳು ಎದುರಿಸಿದ್ದೇನೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts