ನವದೆಹಲಿ: ಚೀನಾದ ವೂಹಾನ್ನಿಂದ ಮರಳುವವರಿಗೆ ತಪಾಸಣೆ ನಡೆಸಲು ವಿಶೇಷ ಚಿಕಿತ್ಸಾ ಕೊಠಡಿಯನ್ನು ದೆಹಲಿಯ ಮಣಿಸರ ಎಂಬಲ್ಲಿ ನಿರ್ಮಿಸಲಾಗಿದೆ.
ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಚಿಕಿತ್ಸೆ ಉದ್ದೇಶಕ್ಕಾಗಿಯೇ ಪೂರ್ಣ ಪ್ರಮಾಣದ ಕಾರ್ಯಾಚರಣೆಯನ್ನು ಭಾರತೀಯ ಸೇನೆ ನಡೆಸಿದೆ. ಅಂದಾಜು 300 ವಿದ್ಯಾರ್ಥಿಗಳನ್ನು ತಪಾಸಣೆಗೊಳಪಡಿಸಲಿದ್ದು, ವೈದ್ಯರ ತಂಡ ಅವರ ಮೇಲೆ ಎರಡು ವಾರಗಳ ಕಾಲ ವಿಶೇಷ ನಿಗಾ ವಹಿಸಲಿದೆ.
ಅಲ್ಲದೆ ಅವರೆಲ್ಲ ಭಾರತಕ್ಕೆ ಬಂದಿಳಿಯುತ್ತಿದ್ದಂತೆ ವಿಮಾನನಿಲ್ದಾಣದಲ್ಲೇ ತಪಾಸಣೆ ನಡೆಸಲಾಗುತ್ತದೆ. ಮಾರಕ ವೈರಸ್ ಕೊರೊನಾ ಶಂಕಿತರೆಂದು ಕಂಡು ಬಂದಲ್ಲಿ ಈ ವಿಶೇಷ ಕೊಠಡಿಗೆ ರವಾನಿಸಲಾಗುವುದು.
ಹಾಗೆ ಬರುವ ವಿದ್ಯಾರ್ಥಿಗಳ ಗುಂಪನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗುವುದು. ಈ ಗುಂಪುಗಳಲ್ಲಿ ವೈರಸ್ ಪೀಡಿತರು ಎಂದು ಕಂಡು ಬಂದಲ್ಲಿ ಅದಕ್ಕಾಗಿ ಸಿದ್ಧಪಡಿಸಿದ ವಾಹನದಲ್ಲಿ ವಿಶೇಷ ಕೊಠಡಿಗೆ ರವಾನಿಸಲಾಗುವುದು.
ಈ ವಿಶೇಷ ಕೊಠಡಿ ಒಳಗೆ ನಾಗರಿಕರಿಗೆ ಪ್ರವೇಶ ಇರುವುದಿಲ್ಲ. ಅಲ್ಲದೆ ತೀವ್ರ ತುರ್ತು ಪರಿಸ್ಥಿತಿ ಹೊರತು ಒಳಗಿರುವ ವೈದ್ಯರು ಮತ್ತು ದಾದಿಯರು ಕೂಡ ಹೊರಹೋಗುವಂತಿಲ್ಲ.
ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸರು ಕೂಡ ದೆಹಲಿಯ ನೈಋತ್ಯ ಭಾಗದಲ್ಲಿ ಇದೇ ರೀತಿಯ ಚಿಕಿತ್ಸೆಗಾಗಿ ವಿಶೇಷ ಘಟಕವನ್ನು ಸ್ಥಾಪಿಸಿದ್ದಾರೆ.
ಕೇರಳದ ತ್ರಿಶೂರ್ನಲ್ಲಿ ರಾಷ್ಟ್ರದ ಮೊದಲ ಕೊರೊನಾ ವೈರಸ್ ಪೀಡಿತ ಮಹಿಳೆ ಗುರುವಾರ ಪತ್ತೆಯಾಗಿದ್ದರು. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಕೇರಳ ಆರೋಗ್ಯ ಸಚಿವಾಲಯ ತಿಳಿಸಿತ್ತು.
ಚೀನಾದ ವುಹಾನ್ನ ವೈದ್ಯಕೀಯ ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆಕೆ ರಾಷ್ಟ್ರಕ್ಕೆ ಮರಳಿದ್ದು, ದೆಹಲಿಯ ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಗಾಗಿ ನಂತರ ತ್ರಿಶೂರ್ಗೆ ಬಂದಿದ್ದರು. ತಪಾಸಣೆ ವರದಿಯಲ್ಲಿ ಆಕೆಗೆ ವೈರಸ್ ಹರಡಿರುವುದು ದೃಢಪಟ್ಟಿತು. ಕೂಡಲೇ ಕೇಂದ್ರ ಸರ್ಕಾರ, ಕೇರಳ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು.
ಮಹಿಳೆಗೆ ವೈರಸ್ ಹರಡಿರುವ ಪ್ರಕರಣ ಪರಿಶೀಲನೆಗೆ ಕೇರಳ ಸರ್ಕಾರ ಮೈದ್ಯಕೀಯ ಮಂಡಳಿ ರಚನೆ ಮಾಡಿದೆ ಎಂದು ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. (ಏಜೆನ್ಸೀಸ್)