ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಐಪಿಎಸ್ ದಂಪತಿ ನಡುವೆ ಮನಸ್ತಾಪ ಉಂಟಾಗಿದ್ದು, ಪತ್ನಿಯ ಸರ್ಕಾರಿ ನಿವಾಸದ ಮುಂದೆ ಪತಿ ಧರಣಿ ನಡೆಸಿದರು.
ಕಲಬುರಗಿ ಐಎಸ್ಡಿ ಎಸ್ಪಿ ಅರುಣ್ ರಂಗರಾಜನ್ ಮತ್ತು ಬೆಂಗಳೂರು ನಗರ ವಿವಿಐಪಿ ವಿಭಾಗ ಡಿಸಿಪಿ ಇಲಕಿಯಾ ಕರುಣಾಕರನ್ ದಂಪತಿ ನಡುವೆ ಕಲಹ ಉಂಟಾಗಿದೆ. ವಸಂತನಗರದ ಪಿಡಬ್ಲ್ಯೂಡಿ ವಸತಿ ಸಂಕೀರ್ಣದಲ್ಲಿ ನೆಲೆಸಿರುವ ಇಲಕಿಯಾ ಮನೆ ಮುಂದೆ ಭಾನುವಾರ ಮಧ್ಯಾಹ್ನದಿಂದ ಅರುಣ್ ರಂಗರಾಜನ್ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳೀಯ ಪೊಲೀಸರು ಮನವೊಲಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಇಬ್ಬರು ಪರಸ್ಪರ ಪ್ರೀತಿಸಿ ಮದುವೆ ಆದೆವು. ಛತ್ತೀಸ್ಗಢದಲ್ಲಿ ಕೆಲಸ ಮಾಡುತ್ತಿದ್ದೆವು. ಹೆಣ್ಣುಮಕ್ಕಳಿಗೆ ಸೂಕ್ತ ಪ್ರದೇಶವಲ್ಲ. ಹೀಗಾಗಿ ನಾವು ಕರ್ನಾಟಕಕ್ಕೆ ವರ್ಗಾವಣೆ ತೆಗೆದುಕೊಳ್ಳೋಣ ಎಂದು ಒತ್ತಾಯಿಸಿದ್ದಳು. ನನಗೆ ಇಷ್ಟ ಇರಲಿಲ್ಲ. ಇದಕ್ಕೆ ಒಪ್ಪದಿದ್ದಾಗ ನನ್ನ ಹೆಸರಿನಲ್ಲಿ ಪತ್ರ ಬರೆದು ತಾನೇ ಸಹಿ ಮಾಡಿ ಛತ್ತೀಸ್ಗಢ ಸರ್ಕಾರಕ್ಕೆ ಕಳುಹಿಸಿದ್ದಳು. ವರ್ಗಾವಣೆ ಗೆ ಸರ್ಕಾರ ಒಪ್ಪಿರಲಿಲ್ಲ.
ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿತ್ತು. ಪತ್ನಿ ಸಂಬಂಧಿಕರು ಹಾಗೂ ಸ್ನೇಹಿತರಿಂದ ವರ್ಗಾವಣೆಗೆ ಒಪ್ಪಿಸಿದ್ದಳು. ಹಿರಿಯ ಅಧಿಕಾರಿಗಳನ್ನು ಸಂರ್ಪಸಿ ಇಬ್ಬರಿಗೂ ಕರ್ನಾಟಕಕ್ಕೆ ವರ್ಗಾವಣೆ ಸಹ ಮಾಡಿಸಿದಳು. ಕರ್ನಾಟಕಕ್ಕೆ ಬಂದ ಬಳಿಕ ವಿಚ್ಛೇದನ ಪಡೆದುಕೊಂಡೆವು. ಮಕ್ಕಳು ಬೇಡವೆಂದು ಇಲಕಿಯಾ ಗರ್ಭಪಾತ ಮಾಡಿಸಿಕೊಂಡಳು. ಮತ್ತೆ ಮಕ್ಕಳು ಬೇಕೆಂದು ಇಬ್ಬರು ಒಪ್ಪಿ ಮಗು ಮಾಡಿಕೊಂಡಿದ್ದೆವು. ಈಗ ನೋಡಿದರೆ ಮಗು ನೋಡಲು ಬಿಡುತ್ತಿಲ್ಲ ಎಂದು ಅರುಣ್ ಆರೋಪಿಸಿದ್ದಾರೆ.
ತಮಿಳುನಾಡು ಮೂಲದ ದಂಪತಿ: ತಮಿಳುನಾಡು ಮೂಲದ ಅರುಣಾ ರಂಗರಾಜನ್ ಮತ್ತು ಇಲಕಿಯಾ ಕರುಣಾಕರನ್ 2012ನೇ ಸಾಲಿನಲ್ಲಿ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿ ಐಪಿಎಸ್ ಆಯ್ಕೆ ಮಾಡಿಕೊಂಡರು. ಅರುಣಾ ಅವರು ಛತ್ತೀಸ್ಗಢ ಕೇಡರ್ ಆದರೆ ಇಲಕಿಯಾ ಕರ್ನಾಟಕ ಕೇಡರ್ ಆಗಿದ್ದಾರೆ. ಸದ್ಯ ಇಬ್ಬರೂ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕೆಲಸ ಬಿಡುವ ವಿಷಯಕ್ಕೆ ಮನಸ್ತಾಪ: ಒಂದೇ ಬ್ಯಾಚ್ನ ಐಪಿಎಸ್ ಅಧಿಕಾರಿಗಳಾದ ಅರುಣಾ ಮತ್ತು ಇಲಕಿಯಾ ಪರಸ್ವರ ಪ್ರೀತಿಸಿ ಮದುವೆ ಆಗಿದ್ದಾರೆ. ಆ ನಂತರ ಪತ್ನಿಗೆ ಕೆಲಸ ತೊರೆಯುವಂತೆ ಪತಿ ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ಇಲಕಿಯಾ ಮತ್ತು ಅವರ ಕುಟುಂಬ ಸದಸ್ಯರು ಒಪ್ಪಿಲ್ಲ. ಕಷ್ಟಪಟ್ಟು ಐಪಿಎಸ್ ಪಾಸ್ ಮಾಡಿ ಈಗ ರಾಜೀನಾಮೆ ಕೊಡುವುದು ಸರಿಯಲ್ಲ ಎಂದು ಇಬ್ಬರ ನಡುವೆ ವೃತ್ತಿ ಪ್ರತಿಷ್ಠೆ ಬೆಳೆದಿದೆ ಎನ್ನಲಾಗಿದೆ. ಇಲಾಖೆಯಲ್ಲಿ ಈ ಇಬ್ಬರು ಅಧಿಕಾರಿಗಳ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿವೆ.