ನವದೆಹಲಿ: ದೇಶದ ವಿವಿಧೆಡೆ ಇರುವ ಆರೆಸ್ಸೆಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ನಾಯಕರು ಮತ್ತು ಕಚೇರಿಗಳ ಮೇಲೆ ಜಾಗತಿಕ ಮಟ್ಟದ ಭಯೋತ್ಪಾದಕ ಗುಂಪುಗಳು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಇಂಟೆಲಿಜೆನ್ಸ್ ಬ್ಯೂರೋ ಇತ್ತೀಚಿನ ಮಾಹಿತಿ ಆಧರಿಸಿ ಎಚ್ಚರಿಸಿದೆ.
ಈ ಉಗ್ರರು ಐಇಡಿಗಳನ್ನು ಅಥವಾ ವೆಹಿಕಲ್ ಬೋರ್ನ್ ಇಂಪ್ರೂವೈಸ್ಡ್ ಐಇಡಿ(VBIEDs)ಗಳನ್ನು ಬಳುಸುವ ಸಾಧ್ಯತೆ ಇದೆ. ಸಂಭಾವ್ಯ ದಾಳಿಗಳು ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ ಮತ್ತು ಇತರೆ ಕಡೆಗಳಲ್ಲಿ ನಡೆಯುವ ಸಾಧ್ಯತೆ ಇದೆ.
ಗುಪ್ತಚರ ಮಾಹಿತಿ ಪ್ರಕಾರ, ಜಾಗತಿಕ ಉಗ್ರ ಸಂಘಟನೆಗಳ ಜತೆಗೆ ಸಂಪರ್ಕ ಹೊಂದಿರುವ ಅನಾಮಧೇಯ ವ್ಯಕ್ತಿಗಳು ಆರೆಸ್ಸೆಸ್ ನಾಯಕರನ್ನು, ಕಚೇರಿಗಳನ್ನು ಮತ್ತು ಪೊಲೀಸ್ ಠಾಣೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಬಹುದು. ಇದಕ್ಕಾಗಿ ಆ ಉಗ್ರರು ಮುಂಬರುವ ದಿನಗಳಲ್ಲಿ ಐಇಡಿಗಳನ್ನು ಮತ್ತು ವಿಬಿಐಡಿಗಳನ್ನು ಬಳಸಬಹುದು. ಎಲ್ಲ ರಾಜ್ಯ ಸರ್ಕಾರಗಳು ಈ ಬಗ್ಗೆ ನಿಗಾವಹಿಸಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ಇರುವ ಪೊಲೀಸ್ ಠಾಣೆ, ಆರೆಸ್ಸೆಸ್ ಕಚೇರಿಗಳಿಗೆ ಬಿಗಿ ಭದ್ರತೆ ಒದಗಿಸಬೇಕು ಎಂದು ಸಲಹೆ ನೀಡಿದೆ.
ಈ ನಿಟ್ಟಿನಲ್ಲಿ ಮಹಾರಾಷ್ಟ್ರ, ದೆಹಲಿ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಅಸ್ಸಾಂಗಳಲ್ಲಿ ಈ ಬಗ್ಗೆ ನಿಗಾವಹಿಸಲಾಗಿದ್ದು, ಪದಾಧಿಕಾರಿಗಳಿಗೆ ರಕ್ಷಣೆ ಒದಗಿಸುವ ವಿಚಾರ ಪರಿಶೀಲನೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಆರೆಸ್ಸೆಸ್ ಕಾರ್ಯಕರ್ತರ ಮೇಲೆ ಅನೇಕ ಬಾರಿ ದಾಳಿಗಳಾದ ಉದಾಹರಣೆಗಳಿವೆ. ಕಳೆದ ತಿಂಗಳು ಬೆಂಗಳೂರು ಪೊಲೀಸರು ಆರೆಸ್ಸೆಸ್ ಕಾರ್ಯಕರ್ತನ ಮೇಲೆ ದಾಳಿ ನಡೆಸಿ ಹತ್ಯೆ ಮಾಡಲು ಯತ್ನಿಸಿದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಡಿಸೆಂಬರ್ನಲ್ಲಿ ಸಿಎಎ ಪರ ಜಾಗೃತಿ ಸಮಾವೇಶ ನಡೆದಾಗ ಈ ದಾಳಿ ಯತ್ನ ಆಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಆರೋಪಿಗಳನ್ನು ಮೊಹಮ್ಮದ್ ಇರ್ಫಾನ್, ಸೈಯದ್ ಅಕ್ಬರ್, ಸೈಯದ್ ಸಿದ್ಧಿಕ್ ಅಕ್ಬರ್, ಅಕ್ಬರ್ ಬಾಷಾ, ಸನಾವುಲ್ಲಾ ಶರೀಫ್, ಸಾದಿಕ್ ಅಲ್ ಅಮೀನ್ ಎಂದು ಗುರುತಿಸಲಾಗಿದ್ದು, ಇದರ ಹಿಂದೆ ದೊಡ್ಡ ಪಿತೂರಿಯೇ ಇದೆ ಎಂದು ಪೊಲೀಸರು ಹೇಳಿದ್ದಾರೆ. (ಏಜೆನ್ಸೀಸ್)