ರಾಯಚೂರು: ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಗಳನ್ನು ಖಾಸಗೀಕರಣ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಸಾಮಾನ್ಯ ವಿಮಾ ಕಂಪನಿಗಳ ನೌಕರರು ಕಾರ್ಯ ಸ್ಥಗಿತಗೊಳಿಸಿ ಸ್ಥಳೀಯ ಯುನೈಟೆಡ್ ಇನ್ಶೂರೆನ್ಸ್ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ವಿಮಾ ಸಂಸ್ಥೆಗಳಲ್ಲಿನ ಬಂಡವಾಳ ಹಿಂಪಡೆಯಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಡುವ ಮೂಲಕ ಕಂಪನಿಗಳ ಖಾಸಗೀಕರಣಕ್ಕೆ ಮುಂದಾಗಿದೆ. ಶೇ.51ಕ್ಕಿಂತ ಹೆಚ್ಚು ಶೇರುಗಳನ್ನು ಖಾಸಗಿಯವರ ಕೈಗೆ ನೀಡಿದರೆ ಸಂಸ್ಥೆ ಅವರ ಪಾಲಾಗಿ ಕೈಗೊಂಬೆಯಂತೆ ಕೆಲಸ ಮಾಡಬೇಕಾಗುತ್ತದೆ.
ಬೆಳೆ ವಿಮೆ ಸೇರಿ ಹಲವು ಸೇವೆಗಳನ್ನು ಸಾಮಾನ್ಯ ವಿಮಾ ಸಂಸ್ಥೆಗಳು ನೀಡುತ್ತಿದ್ದು, ಸಂಸ್ಥೆಗೆ ಹೊರೆಯಾದರೂ ಜನರು ಮತ್ತು ರೈತರಿಗೆ ಉತ್ತಮ ಸೇವೆ ಒದಗಿಸುತ್ತಾ ಬರುತ್ತಿವೆ. ಆದರೆ ಖಾಸಗಿ ಸಂಸ್ಥೆಗಳು ಜನರ ಹಿತಕ್ಕಿಂತ ಲಾಭದ ದೃಷ್ಟಿಯಿಟ್ಟುಕೊಂಡು ಕೆಲಸ ಮಾಡುತ್ತವೆ.
ಕಂಪನಿಗಳು ಖಾಸಗೀಕರಣವಾದಲ್ಲಿ ನೌಕರರು ಅತಂತ್ರರಾಗಲಿದ್ದು, ಉದ್ಯೋಗ ಭದ್ರತೆಯಿಲ್ಲದೆ ಕೆಲಸ ಮಾಡಬೇಕಾದ ಸ್ಥಿತಿ ಎದುರಾಗಲಿದೆ. ಜನ ಸಾಮಾನ್ಯರಿಗೆ ಅನುಕೂಲವಾದ ಯೋಜನೆಗಳು ಸ್ಥಗಿತಗೊಂಡು ಕೇವಲ ಸಂಸ್ಥೆಗೆ ಲಾಭ ತರುವ ಸೇವೆಗಳು ಮಾತ್ರ ಮುಂದುವರಿಯಲಿವೆ. ಹೀಗಾಗಿ ಕಂಪನಿಗಳ ಬಂಡವಾಳ ಹಿಂತೆಗೆತ ತೀರ್ಮಾನ ಕೈಬಿಡಬೇಕು ಎಂದು ನೌಕರರು ಒತ್ತಾಯಿಸಿದರು.
ವಿಮಾ ನೌಕರರ ಸಂಘದ ಪದಾಧಿಕಾರಿಗಳಾದ ವೈ. ಶಶಿಕುಮಾರ, ಅಜಯ್, ಕೆಂಚಪ್ಪ, ಚಂದ್ರಶೇಖರ, ಕೆ.ಇ. ವಡ್ಡಕಿ, ಬಿ.ಸಿ.ನಾಯಕ, ಗುರುರಾಜ ಆಚಾರ್ಯ, ವಾಸಿಂ, ಓರಿಯಂಟಲ್ ಇನ್ಶೂರೆನ್ಸ್, ನ್ಯೂ ಇಂಡಿಯಾ ಇನ್ಶೂರೆನ್ಸ್, ನ್ಯಾಷನಲ್ ಇನ್ಶೂರೆನ್ಸ್, ಯುನೈಟೆಡ್ ಇನ್ಶೂರೆನ್ಸ್ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.