ಶಿವಮೊಗ್ಗ: ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ನಿಯಂತ್ರಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಅಭಯ್ಪ್ರಕಾಶ್ ಸೋಮನಾಳ್ ಸೇರಿ ನಾಲ್ವರನ್ನು ಸೇವೆಯಿಂದ ಅಮಾನತುಗೊಳಿಸಿ ದಾವಣಗೆರೆ ಪೂರ್ವವಲಯದ ಐಜಿಪಿ ಕೆ.ತ್ಯಾಗರಾಜನ್ ಆದೇಶಿಸಿದ್ದಾರೆ.
ಅ.1ರಂದು ಬೆಳಗ್ಗೆ ರಾಗಿಗುಡ್ಡದಲ್ಲಿ ಟಿಪ್ಪು ಸುಲ್ತಾನ್ ಬ್ಯಾನರ್ ವಿಚಾರಕ್ಕೆ ಉಂಟಾದ ಗಲಾಟೆ ರಾತ್ರಿ ಮೆರವಣಿಗೆ ವೇಳೆ ಕಲ್ಲು ತೂರಾಟದ ಸ್ವರೂಪ ಪಡೆದಿತ್ತು. ಗಲಾಟೆ ನಿಯಂತ್ರಿಸಲು ಸ್ವತಃ ಎಸ್ಪಿ ಜಿ.ಕೆ.ಮಿಥುನ್ಕುಮಾರ್ ಅವರೇ ಲಾಠಿ ಲಾರ್ಜ್ ಮಾಡಿದ್ದರು. ಬಳಿಕ ನಿಷೇಧಾಜ್ಞೆ ಜಾರಿಗೊಳಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿತ್ತು.
ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 25ಕ್ಕೂ ಅಧಿಕ ಕೇಸ್ಗಳು ದಾಖಲಾಗಿದ್ದು 65ಕ್ಕೂ ಅಧಿಕ ಜನರನ್ನು ಬಂಧಿಸಲಾಗಿತ್ತು. ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ ಜೈಲಿಗೂ ಕೆಲವರನ್ನು ಸ್ಥಳಾಂತರಿಸಲಾಗಿತ್ತು. 10ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಘಟನೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಘಟನೆ ನಡೆದು ವಾರದ ಬಳಿಕ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಅಭಯ್ಪ್ರಕಾಶ್ ಅವರನ್ನು ಐಜಿಪಿ ತ್ಯಾಗರಾಜನ್, ಸಿಬ್ಬಂದಿಗಳಾದ ಕಾಶಿನಾಥ, ರಂಗನಾಥ ಮತ್ತು ಶಿವರಾಜ್ ಅವರನ್ನು ಎಸ್ಪಿ ಮಿಥುನ್ಕುಮಾರ್ ಅಮಾನತುಗೊಳಿಸಿದ್ದಾರೆ.