ಹುಬ್ಬಳ್ಳಿ: ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರವು ದಲಿತರು ಹಾಗೂ ಸಂವಿಧಾನದ ಕತ್ತು ಹಿಸುವ ಕೆಲಸ ಮಾಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
ಲೋಕಸಭಾ ಬಿಜೆಪಿ ಅಭ್ಯರ್ಥಿ ಪ್ರಚಾರಾರ್ಥ ನಗರದ ಮೂರುಸಾವಿರ ಮಠದ ಆವರಣದಲ್ಲಿ ಎಸ್ಸಿ ಮೋರ್ಚಾ ಸಮಾವೇಶಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ದಲಿತರು ಇತರ ಸಮಾಜದವರ ಸರಿಸಮಾನವಾಗಿ ನಿಲ್ಲುವವರೆಗೆ ಬಿಜೆಪಿಯು ಮೀಸಲಾತಿ ತೆಗೆಯುವುದಿಲ್ಲ. ಹಾಗೂ ಸಂವಿಧಾನವನ್ನೂ ಬದಲಾಯಿಸುವುದಿಲ್ಲ ಎಂದು ಭರವಸೆ ನೀಡಿದರು.
ಮಾಜಿ ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ಎಸ್ಸಿ, ಎಸ್ಟಿಗೆ ಮೀಸಲಿದ್ದ ಕಳೆದ ವರ್ಷ 11144 ಕೋಟಿ ರೂ. ಹಾಗೂ ಈ ವರ್ಷ 14 ಸಾವಿರ ಕೋಟಿ ರೂ. ಅನ್ನು ಕಾಂಗ್ರೆಸ್ ಸರ್ಕಾರವು ಬೇರೆ ಯೋಜನೆಗಳಿಗೆ ವರ್ಗಾಯಿಸಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಅವರು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ಮಾಜಿ ಸಚಿವ ಎನ್. ಮಹೇಶ ಮಾತನಾಡಿ, ಕಾಂಗ್ರೆಸ್ನ ನೇತಾರರು ಡಾ. ಅಂಬೇಡ್ಕರ್ ಅವರನ್ನು ಹೀನಾಯವಾಗಿ ನಡೆಸಿಕೊಂಡರು. ಸತ್ತಾಗಲೂ ಅವರಿಗೆ ಸಂಸ್ಕಾರಕ್ಕೆ ಜಾಗ ಕೊಡದಂಥ ಪರಿಸ್ಥಿತಿ ತಂದಿಟ್ಟರು. ಹೀಗೆ ಅನ್ಯಾಯ ಮಾಡಿರುವ ಕಾಂಗ್ರೆಸ್ ನಾಯಕರನ್ನು ಸೋಲಿಸಬೇಕು. ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರನ್ನು ಗೆಲ್ಲಿಸಬೇಕು ಎಂದು ವಿನಂತಿಸಿದರು.
ಮಾಜಿ ಶಾಸಕರ ವೀರಭದ್ರಪ್ಪ ಹಾಲಹರವಿ, ಪ್ರಮುಖರಾದ ಡಿ.ಎಸ್. ವೀರಯ್ಯ, ಆರ್. ರುದ್ರಯ್ಯ, ಮಹೇಂದ್ರ ಕೌತಾಳ, ಡಾ. ಕ್ರಾಂತಿಕಿರಣ, ಚಂದ್ರಶೇಖರ ಗೋಕಾಕ, ತಿಪ್ಪಣ್ಣ ಮಜ್ಜಗಿ, ಪರಶುರಾಮ ಗಿರಣಿಚಾಳ ಇತರರು ಇದ್ದರು.