ನವದೆಹಲಿ: ಟಿ-20 ಮಾದರಿ ಪಂದ್ಯದಲ್ಲಿ ವಿಶ್ವ ಶ್ರೇಷ್ಠ ಬ್ಯಾಟರ್ ಎನಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಪ್ರವಾಸಿ ಆಸ್ಟ್ರೇಲಿಯಾ ಮತ್ತು ಆತಿಥೇಯ ಭಾರತ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅತ್ಯಂತ ಕಳಪೆ ಸಾಧನೆ ಮಾಡಿದ್ದಾರೆ. ಮೂರು ಪಂದ್ಯಗಳಲ್ಲೂ ಶೂನ್ಯಕ್ಕೆ ಔಟಾಗುವ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಅಮೋಘ ದಾಖಲೆಗಳ ಸಾಲಿಗೆ ಇದೀಗ ಕಳಪೆ ದಾಖಲೆಯನ್ನು ಯಾದವ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಟಿ.20 ಮಾದರಿ ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟ್ಸ್ಮನ್, ಟೀಮ್ ಇಂಡಿಯಾದ ಮಿ. 360 ಡಿಗ್ರಿ ಆಟಗಾರ ಎಂಬೆಲ್ಲ ಹೆಗ್ಗಳಿಕೆ ಹೊಂದಿರುವ ಯಾದವ್ ಇದೀಗ 50 ಓವರ್ ಪಂದ್ಯದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಬೇಕಿದೆ.
ಇದನ್ನೂ ಓದಿ: ಬಿಜೆಪಿಗೆ ಶಿವರಾಮೇಗೌಡ ಬರ್ತಾರೆಂಬ ಸುದ್ದಿ ಹರಿದಾಡ್ತಿದ್ದಂತೆ ಫೈಟರ್ ರವಿ ಎದೆಯಲ್ಲಿ ಆತಂಕ ಶುರು!
ನಿನ್ನೆ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಆಸಿಸ್ ಬೌಲರ್ ಅಸ್ತಾನ್ ಅಗರ್ ಎಸೆದ 36ನೇ ಓವರ್ನಲ್ಲಿ ತಾನು ಎದುರಿಸಿದ ಮೊದಲ ಎಸೆತದಲ್ಲೇ ಸೂರ್ಯಕುಮಾರ್ ಯಾದವ್ ಗೋಲ್ಡನ್ ಡಕ್ ಆದರು. ಆಸಿಸ್ ನೀಡಿದ್ದ 270 ರನ್ ಗುರಿಯನ್ನು ಬೆನ್ನತ್ತುವಾಗ ತಂಡದ ಮೊತ್ತ 185 ರನ್ ಆಗಿದ್ದ ಸಮಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸುವ ಮೂಲಕ ಯಾದವ್ ತಂಡಕ್ಕೆ ಆಘಾತ ನೀಡಿದರು. ಈ ವೇಳೆಗೆ 185 ರನ್ಗೆ ಪ್ರಮುಖ 6 ವಿಕೆಟ್ ಕಳೆದುಕೊಂಡು ಟೀಮ್ ಇಂಡಿಯಾ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿಕೊಂಡಿತು. ಅಂತಿಮವಾಗಿ ಪಂದ್ಯವನ್ನೇ ಕೈಚೆಲ್ಲಿತು.
ಮೊದಲು ಮತ್ತು ಎರಡನೇ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಅವರ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬೀಳುವ ಮೂಲಕ ಮೊದಲೆರೆಡು ಪಂದ್ಯದಲ್ಲೂ ಗೋಲ್ಡನ್ ಡಕ್ ಆದರು. ಭಾರತ ತಂಡದ ನಾಯಕ ರೋಹಿತ್ ಶರ್ಮ ಅವರು ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗೆ ಯಾದವ್ ಅವರನ್ನು ಪ್ರಮುಖ ನಿರೀಕ್ಷೆಯಾಗಿ ಇಟ್ಟುಕೊಂಡಿದ್ದು, ಅವರನ್ನು ಸಂಪೂರ್ಣ ಬೆಂಬಲಿಸಿದ್ದಾರೆ. ಆದರೆ, ಏಕದಿನ ಪಂದ್ಯದಲ್ಲಿ ಯಾದವ್ ಪ್ರದರ್ಶನ ರೋಹಿತ್ಗೆ ಆಘಾತ ಉಂಟು ಮಾಡಿದೆ.
ಯಾದವ್ ಕಳಪೆ ದಾಖಲೆ
ಸೂರ್ಯಕುಮಾರ್ ಏಕದಿನ ಪಂದ್ಯದಲ್ಲಿ ಸತತ ಮೂರು ಡಕ್ಗಳನ್ನು ದಾಖಲಿಸಿದ ಆರನೇ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ (1994), ಅನಿಲ್ ಕುಂಬ್ಳೆ (1996), ಜಹೀರ್ ಖಾನ್ (2003-04), ಇಶಾಂತ್ ಶರ್ಮಾ (2010-11), ಜಸ್ಪ್ರೀತ್ ಬುಮ್ರಾ (2017-2019) ಸತತ ಮೂರು ಬಾರಿ ಗೋಲ್ಡನ್ ಡಕ್ ಆಗಿದ್ದರು.
ಆಸಿಸ್ ಸ್ಪಿನ್ನರ್ಗಳ ನಿರಂತರ ಒತ್ತಡದಲ್ಲಿ ಭಾರತೀಯ ಬ್ಯಾಟಿಂಗ್ ವಿಭಾಗವು ಮತ್ತೊಮ್ಮೆ ವೈಫಲ್ಯ ಅನುಭವಿಸಿದೆ. ಬುಧವಾರ ಚೆನ್ನೈನಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ 21 ರನ್ಗಳ ಆರಾಮದಾಯಕ ಜಯದೊಂದಿಗೆ 2-1 ಅಂತರದಿಂದ ಆಸಿಸ್ ಪಡೆ ಸರಣಿ ವಶಪಡಿಸಿಕೊಂಡರು. ಆಸಿಸ್ ನೀಡಿದ 270 ರನ್ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಭಾರತವು 49.1 ಓವರ್ಗಳಲ್ಲಿ 248 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ತವರು ನೆಲದಲ್ಲೇ ಆಸಿಸ್ ವಿರುದ್ಧ ಟೀಮ್ ಇಂಡಿಯಾ ಮುಖಭಂಗ ಅನುಭವಿಸಿತು. (ಏಜೆನ್ಸೀಸ್)
ಕರೊನಾ ಪ್ರಕರಣಗಳ ಹೆಚ್ಚಳ!; ಸಭೆ ನಡೆಸಿದ ಮೋದಿ, ಸೂಕ್ತ ಮುನ್ನೆಚ್ಚರಿಕೆ ವಹಿಸಲು ಸೂಚನೆ