More

    ಕರೊನಾ ಮುಂಜಾಗ್ರತೆ ನಡುವೆ ಸ್ವಾತಂತ್ರ್ಯ ಸಂಭ್ರಮ: ಸೀಮಿತ ಸಂಖ್ಯೆಯ ಗಣ್ಯರಿಗೆ ಆಹ್ವಾನ

    ನವದೆಹಲಿ: ಕರೊನಾ ಮಹಾಮಾರಿಯ ಆರ್ಭಟದ ನಡುವೆಯೇ 74ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಿಸಲು ಸಕಲ ಸಿದ್ಧತೆ ಮಾಡಲಾಗಿದ್ದು, ದೈಹಿಕ ಅಂತರದ ಪಾಲನೆ ಇನ್ನಿತರ ಮುಂಜಾಗ್ರತಾ ಕ್ರಮಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸತತ 7ನೇ ಬಾರಿಗೆ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿ, ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

    ಈ ನಿಟ್ಟಿನಲ್ಲಿ ಕೆಂಪುಕೋಟೆ ಸುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈ ಬಾರಿ ಸೀಮಿತ ಸಂಖ್ಯೆಯಲ್ಲಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕೆಂಪುಕೋಟೆ ಸುತ್ತ 300ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಸುಮಾರು 4,000 ಭದ್ರತಾ ಸಿಬ್ಬಂದಿ ದೈಹಿಕ ಅಂತರ ಕಾಯ್ದುಕೊಂಡು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

     2 ಸಾವಿರ ಸ್ನೈಪರ್ ನಿಯೋಜನೆ: ಎನ್​ಎಸ್​ಜಿ, ಎಸ್​ಪಿಜಿ ಮತ್ತು ಐಟಿಬಿಪಿಯಂತಹ ಪಡೆಗಳು ಭದ್ರತಾ ಜವಾಬ್ದಾರಿ ನಿರ್ವಹಿಸಲಿದ್ದು, ದೆಹಲಿಯಾದ್ಯಂತ ಸುಮಾರು 45 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಹದ್ದಿನ ಕಣ್ಣಿಡಲಿದ್ದಾರೆ. ಕೆಂಪು ಕೋಟೆಯ ಸುಮಾರು 5 ಕಿ.ಮೀ ವ್ಯಾಪ್ತಿಯಲ್ಲಿನ ಎತ್ತರದ ಕಟ್ಟಡಗಳಲ್ಲಿ 2,000ಕ್ಕೂ ಹೆಚ್ಚು ಸ್ನೈಪರ್​ಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲಾಗಿದೆ. ಜತೆಗೆ ಕೆಂಪುಕೋಟೆಯ ಸಮೀಪವಿರುವ ರೈಲು ನಿಲ್ದಾಣ, ಹೋಟೆಲ್, ವಸತಿ ಗೃಹಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ತೀವ್ರ ಕಣ್ಣಿಟ್ಟಿದ್ದಾರೆ. ಕೆಂಪುಕೋಟೆಯನ್ನು ಸಾರ್ವಜನಿಕರ ವೀಕ್ಷಣೆಗೆ ಒಂದು ದಿನ ಮುಂಚೆಯೇ ನಿರ್ಬಂಧ ವಿಧಿಸಲಾಗಿತ್ತು.

    ಮೋದಿಭಾಷಣದ ಬಗ್ಗೆ ಕುತೂಹಲ: ಪ್ರಧಾನಿ ನರೇಂದ್ರ ಮೋದಿ ಯಾವ್ಯಾವ ವಿಷಯಗಳ ಕುರಿತು ಭಾಷಣದಲ್ಲಿ ಉಲ್ಲೇಖಿಸಲಿದ್ದಾರೆ ಎಂಬ ಬಗ್ಗೆಯೂ ಕಾತರ ಹೆಚ್ಚಾಗಿದೆ. ದೇಶದ ಜನರ ಆರೋಗ್ಯದ ಮಾಹಿತಿಯನ್ನು ಡಿಜಿಟಲ್ ಮಾದರಿಯಲ್ಲಿ ಸಂಗ್ರಹಿಸುವ ‘ಒಂದು ದೇಶ, ಒಂದು ಆರೋಗ್ಯ ಕಾರ್ಡ್’ ಯೋಜನೆಯನ್ನು ಪ್ರಧಾನಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ತೆರಿಗೆ ವ್ಯವಸ್ಥೆಯು ತಡೆರಹಿತ, ನೋವುರಹಿತ, ಮುಖರಹಿತವನ್ನಾಗಿಸಲು ಪ್ರಯತ್ನ: ಪ್ರಧಾನಿ ಮೋದಿ

    ಕರೊನಾ ಬಿಕ್ಕಟ್ಟಿನ ಪರಿಸ್ಥತಿ ನಿರ್ವಹಣೆ, ಲಸಿಕೆ ಅಭಿವೃದ್ಧಿ ಅಥವಾ ಇತರ ದೇಶಗಳು ಅಭಿವೃದ್ಧಿಪಡಿಸಿದ ಲಸಿಕೆಗಳ ಖರೀದಿ ಬಗ್ಗೆ ಮೋದಿ ಮಾತನಾಡಬಹುದು ಎನ್ನಲಾಗಿದೆ. ಆತ್ಮನಿರ್ಭರ ಭಾರತ ಅಭಿಯಾನ, ದೇಶೀಯ ಉತ್ಪಾದನೆ ಹೆಚ್ಚಳ, ಸೇರಿದಂತೆ ಸರ್ಕಾರದ ಸಾಧನೆಗಳ ಬಗ್ಗೆ ಪ್ರಧಾನಿ ಪ್ರಸ್ತಾಪಿಸುವ ಸಾಧ್ಯತೆ ಇದೆ. ಜತೆಗೆ ವಲಸೆ ಕಾರ್ವಿುಕರು, ಆರ್ಥಿಕತೆ ಮತ್ತು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆಯೂ ಉಲ್ಲೇಖಿಸುವ ನಿರೀಕ್ಷೆ ಇದೆ. ಚೀನಾದ ಜತೆ ಇತ್ತೀಚೆಗೆ ಗಡಿ ವಿಷಯವಾಗಿ ನಡೆದ ಸಂಘರ್ಷದ ಬಗ್ಗೆಯೂ ಪ್ರಧಾನಿ ಮಾತನಾಡುವ ಸಂಭವ ಇದೆ ಎಂದು ಮೂಲಗಳು ಹೇಳಿವೆ.

    ಮೋದಿ ಪಕ್ಕ ನಿಲ್ಲುವವರಿಗೆ ಪರೀಕ್ಷೆ : ಪ್ರಧಾನಿ ಮೋದಿ ಭಾಷಣದ ವೇಳೆ ಅವರ ಸಮೀಪದಲ್ಲಿ ನಿಲ್ಲುವ ಸೇನೆಯ ಅಧಿಕಾರಿಗಳನ್ನು ಕರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಧ್ವಜಾರೋಹಣದ ವೇಳೆ ಮೋದಿಯವರ ಪಕ್ಕ ನಿಲ್ಲುವ ಸೇನೆಯ ಮಹಿಳಾ ಅಧಿಕಾರಿ ಸೇರಿದಂತೆ ಎಲ್ಲ ಭದ್ರತಾ ಸಿಬ್ಬಂದಿಯನ್ನು ಕರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

    ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಮೋದಿ ಸಜ್ಜು; ಭೌತಿಕ ತರಗತಿಗಳೇ ಇರಲ್ಲ, ಆನ್​ಲೈನ್​ ಕ್ಲಾಸ್​ಗಳೇ ಎಲ್ಲ….!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts