ಭಟ್ಕಳ: ತಾಲೂಕಿನಲ್ಲಿ ನಿರಂತರ ಮಳೆ ಸುರಿಯುತ್ತಿದ್ದು ಹಲವೆಡೆ ಹಾನಿಯಾಗಿದ ಕುರಿತು ವರದಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಾಲೂಕಿನ ಶಿರಾಲಿ ತಟ್ಟಿಹಕ್ಕಲಿನಲ್ಲಿ ಶನಿಯಾರ ಭಾಸ್ಕರ ದೇವಾಡಿಗ ಅವರ ಮನೆ ಮೇಲೆ ಮರ ಬಿದ್ದು ಸಂಪೂರ್ಣ ಹಾನಿಯಾಗಿದೆ.
ಶಿರಾಲಿ ಭಾಸ್ಕರ ಶಾನಬಾಗ ಅವರ ಅಂಗಡಿ ಭಾಗಶಃ ಹಾನಿಯಾಗಿದ್ದು, ತಟ್ಟಿಹಕ್ಕಲಿನ ಅಂಗನವಾಡಿಯ ಮೇಲೆ ಮರ ಬಿದ್ದು ಕಟ್ಟಡಕ್ಕೆ ಹಾನಿಯಾಗಿದೆ.
ಭಾನುವಾರ ಶಿರಾಲಿ ಗ್ರಾಮದ ಕೋಟೆಬಾಗಿಲು ಮಜರೆಯಲ್ಲಿ ಗುಡ್ಡ ಕುಸಿದು ರಸ್ತೆಯಲ್ಲಿ ಮರ ಬಿದ್ದಿದ್ದು, ಸೋಮವಾರ ಬೆಳಗ್ಗೆ ತೆರವುಗೊಳಿಸಲಾಗಿದೆ.
ರಾತ್ರಿ ಸುರಿದ ಭಾರಿ ಮಳೆಯಿಂದ ಶಿರಾಲಿ ಗ್ರಾಮದ ಬಡ್ಡುಕುಳಿ ಮಜರೆಯ ಶನಿಯಾರ ಜಟ್ಟ ನಾಯ್ಕ ಅವರ ವಾಸ್ತವ್ಯದ ಹಂಚಿನ ಮನೆ ಗೋಡೆ ಕುಸಿದಿದೆ. ಮಾಸ್ತಮ್ಮ ಕೊರ್ಗ ಮೊಗೇರ ಅವರ ಬಲೆ ಇಡುವ ಶೆಡ್ನ ಮೇಲ್ಛಾವಣಿ ಹಾರಿ ಹೋಗಿದೆ. ಹೆಬಳೆಯ ಹೊನ್ನೆಗದ್ದೆ ಗಣಪತಿ ಮಂಜಪ್ಪ ಮೊಗೇರ ಮನೆಯ ಮೇಲ್ಛಾವಣಿ ಗಾಳಿ ಮಳೆಗೆ ಹಾರಿ ಹೋಗಿ ಹಾನಿ ಆಗಿದೆ.
ಹೆಬಳೆಯ ಶಿವಯ್ಯ ನಾರಾಯಣ ನಾಯ್ಕ ಮನೆಯ ಮೇಲೆ ಗಾಳಿ ಮಳೆಯಿಂದ ಹಲಸಿನ ಮರ ಬಿದ್ದು ಭಾಗಶಃ ಹಾನಿ ಆಗಿದೆ.