ರಾಮ ಕಿಶನ್ ಕೆ.ವಿ. ಬೆಂಗಳೂರು
ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಿದ್ದಂತೆ ಬೋರ್ವೆಲ್ಗಳು ಬತ್ತುವ ಸ್ಥಿತಿಯಲ್ಲಿವೆ. ಬರದ ಛಾಯೆ ಎದುರಾಗುತ್ತಿದ್ದಂತೆ ವಿವಿಧ ಬಡಾವಣೆಗಳಲ್ಲಿ ಕುಡಿಯುವ ನೀರಿನ ಕೊರತೆ ಭುಗಿಲೇಳುತ್ತಿದೆ. ಪರಿಣಾಮ, ನಿವಾಸಿಗಳು ಅನಿವಾರ್ಯವಾಗಿ ಟ್ಯಾಂಕರ್ ಮೊರೆಹೋಗುವಂತಾಗಿದೆ. ನಿರೀತವೆಂಬಂತೆ, ಟ್ಯಾಂಕರ್ ನೀರಿನ ಬೆಲೆಯೂ ಏರಿಕೆಯಾಗುತ್ತಿದೆ.
ಕಳೆದ ನವೆಂಬರ್ನಿಂದ 6 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕರ್ಗೆ 550-700 ರೂ. ಬೆಲೆ ಇತ್ತು. ಈಗ 1,000 ರೂ. ಗೂ ಹೆಚ್ಚು ಹಣ ತೆರಬೇಕಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕಾರ್ಯಾಚರಣೆ ನಡೆಸಿ, ಪರಿಸ್ಥಿತಿಯ ಲಾಭ ಪಡೆದುಕೊಳ್ಳುತ್ತಿರುವವರಿಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಟ್ಯಾಂಕರ್ ಭರ್ತಿಯೇ ಸವಾಲು
ಬೋರ್ವೆಲ್ಗಳನ್ನೇ ನಂಬಿಕೊಂಡು ಟ್ಯಾಂಕರ್ ನೀರಿನ ವ್ಯವಹಾರ ನಡೆಯುತ್ತಿದೆ. ಹಾಗೆಂದು ಟ್ಯಾಂಕರ್ ಮಾಲೀಕರಿಗೆ ಅನಾಯಾಸವಾಗಿ ನೀರು ಲಭಿಸುತ್ತಿಲ್ಲ. ದಿನದಿಂದ ದಿನಕ್ಕೆ ನೀರಿನ ಬೇಡಿಕೆ ಹೆಚ್ಚುತ್ತಿದ್ದು, ನಿತ್ಯ 6-8 ಮನೆಗಳಿಗೆ ನೀರು ಪೂರೈಸುತ್ತಿದ್ದೇವೆ. ಆದರೆ ಟ್ಯಾಂಕರ್ನ್ನು ಭರ್ತಿ ಮಾಡುವುದೇ ಸವಾಲಾಗಿದೆ ಎಂದು ಗಿರಿನಗರ ಮೂಲದ ಟ್ಯಾಂಕರ್ ಚಾಲಕರೊಬ್ಬರು ಹೇಳಿಕೊಂಡಿದ್ದಾರೆ.
ಗುಣಮಟ್ಟ ಪರೀಕ್ಷೆಯಾಗಬೇಕು
ಕೆಲವೆಡೆ ಟ್ಯಾಂಕರ್ನಲ್ಲಿ ಪೂರೈಕೆಯಾಗುತ್ತಿರುವ ನೀರಿನಲ್ಲಿ ಕ್ಲೋರೈಡ್ ಹೆಚ್ಚು ಕಂಡುಬರುತ್ತಿದೆ. ಈ ನೀರನ್ನು ಉಪಯೋಗಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕೆಲ ಭಾಗಗಳಲ್ಲಿ ಕುಡಿಯಲು ಯೋಗ್ಯವಲ್ಲದ ನೀರು ಪೂರೈಕೆಯಾಗುತ್ತಿದೆ ಎಂಬುದು ಗ್ರಾಹಕರ ದೂರು.
ಅಪಾರ್ಟ್ಮೆಂಟ್ಗಳಿಂದ ಹೆಚ್ಚಿದ ಬೇಡಿಕೆ
ಯಶವಂತಪುರ, ದಾಸರಹಳ್ಳಿ, ರಾಜರಾಜೇಶ್ವರಿನಗರ, ಕೆ.ಅರ್. ಪುರ, ಚನ್ನಸಂದ್ರ, ನಾಗರಬಾವಿ, ವೈಟ್ಫೀಲ್ಡ್, ವ್ಯಾಪ್ತಿಯಲ್ಲಿ ವಸತಿ ಸಮುಚ್ಚಯಗಳಿಂದ ಟ್ಯಾಂಕರ್ ನೀರಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುತ್ತಿದೆ. ಜತೆಗೆ ವಿವಿಧ ಹೋಟೆಲ್ ಮಾಲೀಕರು ಟ್ಯಾಂಕರ್ ನೀರಿನ ಮೊರೆ ಹೋಗುತ್ತಿದ್ದಾರೆ. ವಾರದಲ್ಲಿ ಎರಡ್ಮೂರು ಬಾರಿ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುತ್ತಿದ್ದಾರೆ.
ನೀರಿನ ಬಿಲ್ ಏರಿಕೆ
ಟ್ಯಾಂಕರ್ ನೀರಿನ ಬೆಲೆ ಹೆಚ್ಚಳವಾಗಲು ವಿದ್ಯುತ್ ಬೆಲೆ ಏರಿಕೆ ಮತ್ತೊಂದು ಕಾರಣ. ವಾಣಿಜ್ಯ ಬಳಕೆಯ ವಿದ್ಯುತ್ ದುಬಾರಿಯಾಗಿದೆ. ಹೀಗಾಗಿ ಬೋರ್ವೆಲ್ ಮಾಲೀಕರು 50&100 ರೂ. ಶುಲ್ಕ ಹೆಚ್ಚಿಸಿದ್ದಾರೆ. ಪ್ರಸ್ತುತ ನಾವು 650& 800 ರೂ.ಗೆ ನೀರು ಸರಬರಾಜು ಮಾಡುತ್ತಿದ್ದೇವೆ. ನಿತ್ಯ ನಾಲ್ಕೆ$ದು ಮನೆಗಳಿಂದ ನೀರು ಪೂರೈಸುವಂತೆ ೋನ್ ಕರೆಗಳು ಬರುತ್ತಿವೆ. ಮಾರ್ಚ್ನಲ್ಲಿ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ. ಈ ಸಂದರ್ಭ ಟ್ಯಾಂಕರ್ ನೀರಿನ ಬೆಲೆ 800 ರೂ. ದಾಟುವುದು ಬಹುತೇಕ ಖಚಿತ ಎಂದು ನಾಗರಬಾವಿಯ ಟ್ಯಾಂಕರ್ ಮಾಲೀಕ ರಾಮಕೃಷ್ಣ ತಿಳಿಸಿದ್ದಾರೆ.
ಟೆಂಡರ್ ಇಲ್ಲ
ನೀರಿನ ಅಭಾವ ಎದುರಾದ ಸಂದರ್ಭದಲ್ಲಿ ಬಿಬಿಎಂಪಿ/ ಜಲಮಂಡಳಿ ಉಚಿತ ಟ್ಯಾಂಕರ್ ನೀರು ಪೂರೈಕೆಗೆ ಮುತುವರ್ಜಿ ವಹಿಸುತ್ತದೆ. ಖಾಸಗಿ ಕೊಳವೆಬಾವಿಗಳಿಂದ ನೀರು ಖರೀದಿಸಿ ಜನರಿಗೆ ಪೂರೈಸಲಾಗುತ್ತದೆ. ಇದಕ್ಕಾಗಿ ತುರ್ತು ಟೆಂಡರ್ ಕರೆದು ನೀರು ಪೂರೈಕೆಗೆ ಆದ್ಯತೆ ನೀಡಲಾಗುತ್ತಿತ್ತು. ಆದರೆ, ಈ ವರ್ಷ ಬಿಬಿಎಂಪಿಯಿಂದ ಹೆಚ್ಚಿನ ಕ್ರಮ ಆಗಿಲ್ಲ. ಹಳೇ ಟೆಂಡರ್ದಾರರಿಗೆ ಬಿಲ್ ಬಾಕಿ ನೀಡದ ಕಾರಣ ಹೊಸ ಟೆಂಡರ್ ಕಥೆ ಕೇಳುವಂತೆಯೇ ಇಲ್ಲ.
ಎರಡು ಮನೆಗಳನ್ನು ಬಾಡಿಗೆಗೆ ನೀಡಿದ್ದು, ಕಾವೇರಿ ನೀರು ಸಾಕಾಗುವುದಿಲ್ಲ. 10 ದಿನಗಳಿಗೆ ಒಂದರಂತೆ ಟ್ಯಾಂಕರ್ ನೀರು ತರಿಸಿಕೊಳ್ಳುತ್ತಿದ್ದೇನೆ. ಟ್ಯಾಂಕರ್ ನೀರಿಗೆ ಹಿಂದಿನ ದಿನವೇ ಬುಕ್ ಮಾಡಬೇಕು. ಕಳೆದ ಎರಡು ತಿಂಗಳ ಅವಧಿಯಲ್ಲಿ 300 ರೂ. ಬೆಲೆ ಏರಿಕೆಯಾಗಿದೆ. ಮಾರ್ಚ್ ಬಳಿಕ 1,000-1,500 ರೂ. ನೀಡಿ ಟ್ಯಾಂಕರ್ ನೀರು ತರಿಸಿಕೊಳ್ಳಬೇಕಾದ ಪರಿಸ್ಥಿತಿ ಬರಬಹುದು.
-ಮಾರುತೇಶ್, ಬಾಡಿಗೆ ಮನೆ ಮಾಲೀಕ, ಶ್ರೀನಗರ