ಬೆಳಗಾವಿ: ನಗರ, ಪಟ್ಟಣಗಳಲ್ಲಿ ಸಿಗುತ್ತಿರುವ ಸೌಲಭ್ಯ ಹಳ್ಳಿಗರಿಗೂ ಸಿಗಬೇಕು ಎಂಬ ಮಹದಾಸೆಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾಕಷ್ಟು ಯೋಜನೆ ಅನುಷ್ಠಾನಗೊಳಿಸಿದ್ದಾರೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದ್ದಾರೆ.
ತಾಲೂಕಿನ ಕಂಗ್ರಾಳಿ ಬಿ.ಕೆ. ಗ್ರಾಮದಲ್ಲಿ, ಶ್ಯಾಮಪ್ರಸಾದ್ ಮುಖರ್ಜಿ ರಾಷ್ಟ್ರೀಯ ರೂರ್ಬನ್ ಸಿಜಿಎಫ್ ಅನುದಾನ ಯೋಜನೆಯಡಿ 1.58 ಕೋಟಿ ರೂ. ವೆಚ್ಚದಲ್ಲಿ 3.5 ಕಿ.ಮೀ. ಸಿ.ಸಿ. ರಸ್ತೆ ನಿರ್ಮಾಣಕ್ಕೆ (ಒಟ್ಟು 34 ಗಲ್ಲಿಗಳಲ್ಲಿ) ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಹಳ್ಳಿ ಜನರಿಗೆ ಶುದ್ಧ ಕುಡಿಯುವ ನೀರು, ರಸ್ತೆ, ಮಾರುಕಟ್ಟೆ ಸೇರಿ ಇನ್ನಿತರ ಸೌಲಭ್ಯ ಕಲ್ಪಿಸುವ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಮುಂಬರುವ ದಿನಗಳಲ್ಲಿ ಹಳ್ಳಿಗಳು ಸಂಪೂರ್ಣ ಬದಲಾಗಲಿವೆ ಎಂದರು.
ಕರೊನಾ ವೈರಸ್ನಿಂದ ನಗರದಿಂದ ಹಳ್ಳಿಗಳತ್ತ ಮುಖ ಮಾಡಿದ್ದಾರೆ. ವಿದ್ಯಾವಂತ ಯುವಕರು ಸ್ವಂತ ಉದ್ಯೋಗ ಕೈಗೊಳ್ಳಬೇಕು. ಅಲ್ಲದೆ, ಕೇಂದ್ರ ಸರ್ಕಾರದ ಮುದ್ರಾ ಸೇರಿ ವಿವಿಧ ಯೋಜನೆಗಳಡಿ ಸಿಗುತ್ತಿರುವ ಸೌಲಭ್ಯ ಪಡೆದು ಉದ್ಯಮ ಆರಂಭಿಸಬೇಕು ಎಂದರು. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ನಗರಕ್ಕೆ ಹೊಂದಿಕೊಂಡಿರುವ ಕಂಗ್ರಾಳಿ ಬಿ.ಕೆ. ಗ್ರಾಮಕ್ಕೆ ಸಮರ್ಪಕ ಸೌಲಭ್ಯ ಕಲ್ಪಿಸಿ ಮಾದರಿ ಗ್ರಾಮವನ್ನಾಗಿಸುವುದೇ ನನ್ನ ಕನಸು ಎಂದರು. ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ, ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಧನಂಜಯ ಜಾಧವ, ಪ್ರದೀಪ ಪಾಟೀಲ, ದತ್ತಾ ಆರ್. ಪಾಟೀಲ, ಜಯರಾಂ ಪಾಟೀಲ, ನಾತಾಜಿ ಪಾಟೀಲ, ಕಲ್ಲಪ್ಪ ಜಾಧವ ಇತರರು ಇದ್ದರು.