ಬೆಳಗಾವಿ: ನಗರದ ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ್ನಲ್ಲಿ ಆಚಾರ್ಯ ಶ್ರೀ ವರ್ಧಮಾನಸಾಗರ ಮಹಾರಾಜರ ಸಂಘದ ಚಾರ್ತುಮಾಸ್ಯ ಕಾರ್ಯಕ್ರಮ ನಡೆಯುತ್ತಿದೆ. ಈ ಸಂಘದಲ್ಲಿನ ತಪಸ್ವಿ ಶ್ರೀ ದೇವಪ್ರಭಸಾಗರ ಮಹಾರಾಜರು ಬುಧವಾರ ಸಲ್ಲೇಖನ ಸಮಾಧಿ ಮರಣ ಹೊಂದಿದರು.
ರಾಜಸ್ಥಾನ ರಾಜ್ಯದ ಉದಯಪುರ ಬಳಿ ಇರುವ ಬಾಠೇಡಾ ಗ್ರಾಮದಲ್ಲಿ 1932ರಲ್ಲಿ ಜನಿಸಿದ್ದ ಅವರು, ಲೋಕೋಪಯೋಗಿ ಇಲಾಖೆ ಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 2007ರಲ್ಲಿ ಕ್ಷುಲ್ಲಕ ದೀಕ್ಷೆ , 2010ರಲ್ಲಿ ಮುನಿ ದೀಕ್ಷೆ ಸ್ವೀಕರಿಸಿದ್ದರು. 12 ವರ್ಷಗಳ ಹಿಂದೆ ನಿಯಮ ಸಲ್ಲೇಖನ ವ್ರತ ಆರಂಭಿಸಿದ್ದರು. ನಿಯಮ ಸಲ್ಲೇಖನ ವ್ರತದ ಅವಧಿ ಮುಗಿದ ಕಾರಣ, 9 ದಿನಗಳ ಹಿಂದೆ ತಮ್ಮ ಗುರುಗಳ ಆಜ್ಞೆಯಂತೆ ಯಮಸಲ್ಲೇಖನ ವ್ರತ ಸ್ವೀಕರಿಸಿದ್ದರು.
ಅವರ ಅಂತ್ಯಸಂಸ್ಕಾರದಲ್ಲಿ ಜೈನ ಸಮಾಜದ ಬಾಂಧವರು ಪಾಲ್ಗೊಂಡಿದ್ದರು. ಕಳೆದ ಎರಡು ತಿಂಗಳ ಅವಧಿಯಲ್ಲಿ ಮೂವರು ಮುನಿಗಳು ಸಲ್ಲೇಖನ ಸಮಾಧಿ ಮರಣ, ಓರ್ವ ಮಾತಾಜಿ ಸಮಾಧಿ ಮರಣ ಹೊಂದಿದ್ದಾರೆ.