ಬಾಗಲಕೋಟೆ: ಮನೆಯೊಂದರ ಶಿವನ ಮೂರ್ತಿಯ ಮುಂಭಾಗದಲ್ಲಿ ನಾಗರಹಾವು ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದಂತಹ ಘಟನೆ ಹಳೇ ಬಾಗಲಕೋಟೆಯ ಜೈನ್ ಪೇಟೆಯಲ್ಲಿ ನಡೆದಿದೆ.
ಜೈನ್ ಪೇಟೆಯ ಶಂಕರಲಿಂಗ ದೇವಸ್ಥಾನದ ಸಮೀಪದಲ್ಲಿರುವ ಸಂಗಣ್ಣ ಬಾದವಾಡಗಿ ಮಾಲೀಕತ್ವದ ಬಸವರಾಜ ಹಳ್ಳೂರು ಅವರ ಮನೆಯಲ್ಲಿ ನಾಗರ ಹಾವು ಕಾಣಿಸಿಕೊಂಡಿದೆ. ಮನೆಯ ಜಂತಿಯಿಂದ ಇಳಿದು ಕಪಾಟಿನಲ್ಲಿಟ್ಟಿರುವ ಶಿವನ ಮೂರ್ತಿ ಪಕ್ಕ ನಾಗರ ಹಾವು ಹೆಡೆ ಬಿಚ್ಚಿ ಕುಳಿತಿದೆ. ಇದು ಒಂದು ಕ್ಷಣ ಮನೆಯವರ ಅಚ್ಚರಿಗೆ ಕಾರಣವಾಗಿದೆ.
ಶಿವನ ಮೂರ್ತಿಯ ಮುಂಭಾಗ ನಾಗರಹಾವು ಪ್ರತ್ಯಕ್ಷವಾಗಿರುವುದು ಗೊತ್ತಾಗುತ್ತಿದ್ದಂತೆ ಮನೆಯವರು ಸ್ಥಳೀಯ ಉರಗ ರಕ್ಷಕ ಸ್ನೇಕ್ ರಾಜು ಎಂಬುವವರಿಗೆ ಕರೆ ಮಾಡಿ ಸುದ್ದಿ ತಿಳಿಸಿದ್ದಾರೆ. ಕೂಡಲೇ ಉರಗ ರಕ್ಷಕ ಬಂದು ನಾಗರ ಹಾವನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ.