ಕೊಲ್ಲಂ: ಆಘಾತಕಾರಿ ಘಟನೆಯೊಂದರಲ್ಲಿ ತಾತ ಮತ್ತು ಚಿಕ್ಕಮ್ಮ ಸೇರಿ ಕುದಿಯುತ್ತಿದ್ದ ಮೀನಿನ ಸಾಂಬಾರ್ ಅನ್ನು ಮೂರು ವರ್ಷದ ಮಗುವಿನ ಮೇಲೆ ಸುರಿದು ಮೃಗೀಯವಾಗಿ ಹಿಂಸಿಸಿರುವುದು ಕೇರಳದ ಕೊಲ್ಲಂ ಜಿಲ್ಲೆಯ ಕಣ್ಣನಲ್ಲೂರ್ನಲ್ಲಿ ಗುರುವಾರ ಸಂಜೆ ವರದಿಯಾಗಿದೆ.
ಮಗುವಿನ ದೇಹವು 35 ರಷ್ಟು ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗಾಗಿ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 307ರ ಅಡಿಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಘಟನೆ ಬಗ್ಗೆ ಮಾತನಾಡಿರುವ ಮಗುವಿನ ತಾಯಿ, ತಾತಾ ಮತ್ತು ಚಿಕ್ಕಮ್ಮನ ಭಯದಿಂದ ನನ್ನ ಮಗುವಿನೊಂದಿಗೆ ನಾನು ಬೆಡ್ ರೂಮ್ಗೆ ಓಡಿದೆ. ನನ್ನ ಪತಿಯನ್ನು ಹಿಡಿದು ಥಳಿಸಿದ ಅವರು ನನ್ನ ಹಿಂಬಾಲಿಸಿ ಬಂದು ನನ್ನ ಮೇಲೆಯೂ ಹಲ್ಲೆ ಮಾಡಿ, ಮಗುವನ್ನು ಕಸಿದುಕೊಂಡು ಅದರ ಮೇಲೆ ಬಿಸಿಯಾದ ಮೀನಿನ ಸಾಂಬಾರ್ ಸುರಿದರು ಎಂದು ಆರೋಪಿಸಿದ್ದಾರೆ.
ಹೈದರಾಬಾದ್ನಲ್ಲಿ ವೈದ್ಯನಾಗಿರುವ ನನ್ನ ಪತಿ, ಗುಜರಾತ್ ಮೂಲದವಳಾದ ನನ್ನನ್ನು ಮದುವೆಯಾದಗಿನಿಂದ ಮನೆಯಲ್ಲಿ ಈ ರೀತಿಯ ಹಿಂಸಾತ್ಮಕ ಘಟನೆ ನಡೆಯುತ್ತಿದೆ ಎಂದು ಮಗುವಿನ ತಾಯಿ ದೂರಿದ್ದಾರೆ.
ವರ್ಷದ ಹಿಂದೆ ಕೊಲ್ಲಂಗೆ ಸ್ಥಳಾಂತರವಾಗಿದ್ದೆವು. ಅಂದಿನಿಂದ ಕೌಟಂಬಿಕ ಹಿಂಸೆಯನ್ನು ಅನುಭವಿಸುತ್ತಿದ್ದೇನೆ. ಮೀನಿನ ಸಾಂಬಾರ್ನಿಂದ ನನ್ನ ಮೇಲೆ ಗುರಿಯಿಡಲಾಗಿತ್ತು. ಆದರೆ, ದುರಾದೃಷ್ಟವಶಾತ್ ಅದು ನನ್ನ ಮಗುವಿನ ಮೇಲೆ ಬಿತ್ತು ಎಂದು ವಿವರಿಸಿದ್ದಾರೆ.
ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗುವಿನ ಸ್ಥಿತಿ ಗಂಭೀರವಾಗಿಲ್ಲದೇ ಇದ್ದರೂ ಈಗಲೇ ಏನನ್ನು ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಪೊಲೀಸರು ಮಗುವಿನ ತಾತನನ್ನು ಬಂಧಿಸಿದ್ದು, ಆರೋಪಿ ನಿವೃತ್ತ ಸರ್ಕಾರಿ ನೌಕರನೂ ಹೌದು. ಚಿಕ್ಕಮ್ಮನು ಕೂಡ ಸುಶಿಕ್ಷಿತೆ. ಆದರೆ, ಈ ರೀತಿ ಮೃಗಗಳಂತೆ ವರ್ತಿಸಿರುವುದು ದುರಾದೃಷ್ಟವೇ ಸರಿ ಎಂದು ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗದ ಅಧ್ಯಕ್ಷ ಪಿ. ಸುರೇಶ್ ತಿಳಿಸಿದ್ದಾರೆ. (ಏಜೆನ್ಸೀಸ್)