ಐಮಂಗಲ: ಯುವ ಸಮುದಾಯ ರಕ್ತದಾನ ಮಾಡುವ ಮೂಲಕ ಅಪಘಾತ ಇನ್ನಿತರ ತುರ್ತು ಸ್ಥಿತಿಯಲ್ಲಿರುವವರ ಪ್ರಾಣ ರಕ್ಷಣೆಗೆ ಮುಂದಾಗಬೇಕು ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು.
ಜಿಲ್ಲಾಡಳಿತ, ಜಿಪಂ, ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಪಂ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಗ್ರಾಮದ ಪೊಲೀಸ್ ತರಬೇತಿ ಶಾಲೆ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಎಲ್ಲದಕ್ಕೂ ಶ್ರೇಷ್ಠವಾದದು ರಕ್ತದಾನ. ಇದನ್ನು ದಾನ ಮಾಡುವುದರಿಂದ ಹೋಗುವ ಪ್ರಾಣ ತಡೆಯಬಹುದು. ರಕ್ತದಾನದ ಬಗ್ಗೆ ಯಾವುದೇ ಹಿಂಜರಿಕೆ ಬೇಡ. ಇದನ್ನು ನೀಡುವುದರಿಂದ ಆರೋಗ್ಯಕ್ಕೆ ಅನುಕೂಲವೇ ಹೊರತು ಅನಾನುಕೂಲ ಏನೂ ಇಲ್ಲ ಎಂದು ತಿಳಿಸಿದರು.
ಸುಖಿ ಸಮಾಜ ನಿರ್ಮಾಣದಲ್ಲಿ ಪೊಲೀಸರ ಪಾತ್ರ ದೊಡ್ಡದಿದೆ. ಸಮಸ್ಯೆ ಹೇಳಿಕೊಂಡು ಠಾಣೆ ಇನ್ನಿತರ ಪ್ರದೇಶದಲ್ಲಿ ತಮ್ಮನ್ನು ಭೇಟಿಯಾಗುವ ಸಾರ್ವಜನಿಕರೊಂದಿಗೆ ಪೊಲೀಸರು ಸಹನೆಯಿಂದ ವರ್ತಿಸಬೇಕು. ಸಮಸ್ಯೆಯನ್ನು ಸಮಾಧಾನದಿಂದ ಆಲಿಸಿ ಸೂಕ್ತ ಪರಿಹಾರ ಒದಗಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಪೊಲೀಸ್ ತರಬೇತಿ ಶಾಲೆಗೆ ಹೆಚ್ಚಿನ ಸ್ಥಳಾವಕಾಶ ಮತ್ತು ನೀರಿ ಸೌಲಭ್ಯ ಒದಗಿಸುವುದಾಗಿ ಹೇಳಿದ ಶಾಸಕರು, ಈ ವರ್ಷ ಉತ್ತಮ ಮಳೆ ಹಾಗೂ ಭದ್ರೆ ಕೃಪೆಯಿಂದ ವಿವಿ ಸಾಗರದಲ್ಲಿ 102 ಅಡಿ ನೀರು ಸಂಗ್ರಹವಾಗಿದೆ. ಭದ್ರಾ ಮೇಲ್ದಂಡೆ ಯೋಜನೆ ತ್ವರಿತಕ್ಕೆ ಒತ್ತು ನೀಡಲಾಗುವುದು. ಈ ಭಾಗದ ಬಹುದಿನಗಳ ಬೇಡಿಕೆಯಾಗಿದ್ದ ಸಾರಿಗೆ ಘಟಕ ಸ್ಥಾಪನೆಗೆ ಎರಡ್ಮೂರು ತಿಂಗಳಲ್ಲಿ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಪ್ರಾಂಶುಪಾಲ ಹಾಗೂ ಎಸ್ಪಿ ಪಿ.ಪಾಪಣ್ಣ ಅಧ್ಯಕ್ಷತೆ ವಹಿಸಿದ್ದರು. ಎ.ಡಿ.ಪಿ.ಸತೀಶ್, ಜಿಪಂ ಸದಸ್ಯೆ ಟಿ.ಆರ್.ರಾಜೇಶ್ವರಿ, ತಾಪಂ ಸದಸ್ಯ ಬಿ.ಕೆ.ತಿಪ್ಪೇಸ್ವಾಮಿ, ಡಿಎಚ್ಒ ಪಾಲಾಕ್ಷ, ಪಿಡಿಒ ಚಿಕ್ಕಣ್ಣ, ಸದಸ್ಯ ಎಲ್.ತಿಪ್ಪೇಸ್ವಾಮಿ, ಸಿಪಿಐ ವರದರಾಜು, ಸತೀಶ್ ಯಳ್ಳೂರು, ಆರ್ಪಿಐ ಬಿ.ಪರಶುರಾಮ್, ಪಿಎಸ್ಐ ಎ.ಮಂಜುನಾಥ್, ಆರೋಗ್ಯ ಇಲಾಖೆಯ ಡಾ.ಚಂದ್ರಕಾಂತ್ ಗೌಡರ್, ಗ್ರಾಮಸ್ಥರಾದ ಓ.ಜಿ.ಬಸವರಾಜ್, ಸಿ.ರಾಧಕೃಷ್ಣ, ಟಿ.ಎಲ್.ಬಸವರಾಜಪ್ಪ ಇತರರಿದ್ದರು.