ಕಾರವಾರ: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 9 ಲಾರಿಗಳನ್ನು ಹಿಡಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಬುಧವಾರ ವಶಕ್ಕೆ ಪಡೆದಿದ್ದಾರೆ. ಇಲಾಖೆ ಹಿರಿಯ ಭೂ ವಿಜ್ಞಾನಿ ಆಶಾ ಎಸ್.ಜಿ. ನೇತೃತ್ವದಲ್ಲಿ ದಾಳಿ ನಡೆದಿದೆ. ಅವರು ಸರ್ಕಾರಿ ವಾಹನದಲ್ಲಿ ತೆರಳಿದಲ್ಲಿ ಮರಳು ಸಾಗಣೆದಾರರು ಎಚ್ಚೆತ್ತುಕೊಳ್ಳುತ್ತಾರೆ ಎಂಬ ಕಾರಣದಿಂದ ಖಾಸಗಿ ವಾಹನದಲ್ಲಿ ತೆರಳಿ ಮರಳು ಲಾರಿಗಳನ್ನು ತಡೆದು ನಿಲ್ಲಿಸಿದ್ದಾರೆ. ಹೊನ್ನಾವರದಿಂದ ಮರಳು ಕೊಂಡೊಯ್ಯುತ್ತಿದ್ದ ಲಾರಿಗಳನ್ನು ಸಿದ್ದಾಪುರ ನಾಣಿಕಟ್ಟಾ ಬಳಿ ಹಿಡಿದಿದ್ದು, ಅದರಲ್ಲಿದ್ದ 120 ಮೆಟ್ರಿಕ್ ಟನ್ ಮರಳನ್ನು ವಶಕ್ಕೆ ಪಡೆಯಲಾಗಿದೆ. ಲಾರಿಗಳಿಗೆ ಸುಮಾರು 6 ಲಕ್ಷ ರೂ. ದಂಡ ವಿಧಿಸಲಾಗುತ್ತಿದೆ. ಮಾಲೀಕರು ದಂಡ ಭರಣ ಮಾಡಿದ ನಂತರ ಅವುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಗಣಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.