ಬಾಳೆಹೊನ್ನೂರು: ಬದಲಾದ ಆಹಾರ ಪದ್ಧತಿ, ಕೆಲಸದ ಒತ್ತಡದಿಂದ ಆರೋಗ್ಯದಲ್ಲಿ ಏರುಪೇರಾಗುತ್ತಿದೆ ಎಂದು ಫೂಟ್ಸ್ ಪಲ್ಸ್ ಥೆರಪಿ ತಜ್ಞ ಡಾ. ರತ್ನಾಕರ್ ಶೆಟ್ಟಿ ಹೇಳಿದರು.
ರೋಟರಿ ಕ್ಲಬ್ ಸಹಯೋಗದಲ್ಲಿ ಆಯೋಜಿಸಿರುವ 15 ದಿನಗಳ ಉಚಿತ ಫೂಟ್ಸ್ ಪಲ್ಸ್ ಥೆರೆಪಿ ಶಿಬಿರದಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಮೇಕ್ ಇನ್ ಇಂಡಿಯಾದಡಿ ಉತ್ಪಾದನೆಯಾದ ಚಿಕಿತ್ಸಾ ಯಂತ್ರವನ್ನು 42 ದೇಶಗಳಲ್ಲಿ ಬಳಸುತ್ತಿದ್ದಾರೆ ಎಂದು ತಿಳಿಸಿದರು.
ಡಬ್ಲುೃಎಚ್ಒ ಸಮೀಕ್ಷೆ ವರದಿ ಪ್ರಕಾರ 18-40 ವರ್ಷದೊಳಗಿನ ಶೇ.28 ಮಂದಿ ಮಧುಮೇಹ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. 13 ವರ್ಷದ ಕೆಲವು ಮಕ್ಕಳು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಒತ್ತಡದ ಬದುಕು. ಆಹಾರ ಪದ್ಧತಿ ಬದಲಾವಣೆಯಿಂದ ಶರೀರ ದುರ್ಬಲವಾಗುತ್ತಿದೆ ಎಂದು ಹೇಳಿದರು.
ಪರ್ಯಾಯ ಚಿಕಿತ್ಸಾ ವಿಧಾನದಿಂದ ನರಮಂಡಲ ಹಾಗೂ ರಕ್ತ ಸಂಚಾರ ಸುಗಮಗೊಳಿಸಲು ಫೂಟ್ಸ್ ಪಲ್ಸ್ ಥೆರಪಿ ಸಹಕಾರಿ. ದೈನಂದಿನ ಬದುಕಿನಲ್ಲಿ ಋಷಿಮುನಿಗಳು ನೀಡಿದ ಕೊಡುಗೆಯಾದ ಯೋಗಾಸನ ಹಾಗೂ ವೈದ್ಯರ ಸಲಹೆಯಂತೆ ನಿತ್ಯವೂ ನಡೆಯುವುದು, ಪೌಷ್ಟಿಕ ಆಹಾರದೊಂದಿಗೆ ಸರಳ ಚಿಕಿತ್ಸೆಯನ್ನು ಯಂತ್ರದ ಮೂಲಕ ಪಡೆದರೆ ಗುಣಮುಖರಾಗಬಹುದು ಎಂದರು.
ಫೂಟ್ ಪಲ್ಸ್ ಥೆೆರಪಿ ಬೇಲೂರಿನ ಮೇಘನಾ ಮಂಜುನಾಥ್ ಮಾತನಾಡಿ, ಮೂರು ವರ್ಷಗಳಿಂದ ರಾಜ್ಯಾದ್ಯಂತ ಸಂಚರಿಸಿ ಥೆರೆಪಿ ನೀಡುತ್ತಿದ್ದು ಎಲ್ಲರೂ ದಿನಕ್ಕೆ ಅರ್ಧ ಗಂಟೆ ಈ ಚಿಕಿತ್ಸೆಗೆ ಮೀಸಲಿಟ್ಟರೆ ಆರೋಗ್ಯ ಪಡೆದುಕೊಳ್ಳಬಹುದು ಎಂದು ಹೇಳಿದರು.
ರೋಟರಿ ಕ್ಲಬ್ ಅಧ್ಯಕ್ಷ ಎ.ಆರ್.ಸುರೇಂದ್ರ ಮಾತನಾಡಿ, ಪಟ್ಟಣಕ್ಕೆ ಸೀಮಿತವಾಗಿದ್ದ ಚಿಕಿತ್ಸಾ ವಿಧಾನವನ್ನು ಗ್ರಾಮೀಣ ಪ್ರದೇಶದಲ್ಲೂ ನೀಡುವ ಉದ್ದೇಶದಿಂದ 15 ದಿನಗಳ ಶಿಬಿರ ಏರ್ಪಡಿಸಿದ್ದು, ನಿತ್ಯವೂ 50-60 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಮುಂದಿನ ದಿನಗಳಲ್ಲೂ ಇಂಥ ಶಿಬಿರ ನಡೆದಾಗ ಗ್ರಾಮೀಣ ಪ್ರದೇಶದ ಜನರು ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಡಾ. ರೋಹಿತ್ ಶೆಟ್ಟಿ, ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ತಿಮ್ಮಯ್ಯ, ಕಾಫಿ ಬೆಳೆಗಾರ ಎಂ.ಕೆ.ಸುಂದರೇಶ್ ಇದ್ದರು.