ಬೆಂಗಳೂರು: ಜೀವನೋಪಾಯಕ್ಕಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗಿರುವ ರೇಷನ್ ಕಾರ್ಡ್ದಾರರಿಗೆ ಯಾವುದೇ ಕಾರಣಕ್ಕೂ ನ್ಯಾಯಬೆಲೆ ಅಂಗಡಿಗಳು ಪಡಿತರ ನಿರಾಕರಿಸುವಂತಿಲ್ಲ. ಒಂದು ವೇಳೆ ಪೋರ್ಟಬಿಲಿಟಿ ಯೋಜನೆಯಡಿ ಪಡಿತರ ನೀಡಲು ನ್ಯಾಯಬೆಲೆ ಅಂಗಡಿ ಮಾಲೀಕರು ನಿರ್ಲಕ್ಷ್ಯ ತೋರಿದರೆ ಕೇಂದ್ರ ಸರ್ಕಾರದ ಸಹಾಯವಾಣಿ 14445ಕ್ಕೆ ಮತ್ತು ರಾಜ್ಯದ ಸಹಾಯವಾಣಿ 1967ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ಆಹಾರ ಇಲಾಖೆ ತಿಳಿಸಿದೆ.
ಒಂದು ರಾಷ್ಟ್ರ ಒಂದು ಪಡಿತರ ಯೋಜನೆ ಪಡೆಯಲು ಬಯಸುವವರು ಕೇಂದ್ರದ ಮೇರಾ ರೇಷನ್ ಆ್ಯಪ್ ಅಥವಾ 14445 ಸಹಾಯವಾಣಿಗೆ ಕರೆ ಮಾಡಿ ಆಯಾ ರಾಜ್ಯದಲ್ಲಿ ಪಡಿತರ ಪಡೆಯುವ ಬಗ್ಗೆ ನೋಂದಾಯಿಸಿಕೊಳ್ಳಬಹುದು. ಗೂಗಲ್ ಪ್ಲೇ ಸ್ಟೋರ್ನಲ್ಲಿ ಈ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ರಾಷ್ಟ್ರದ ಯಾವುದೇ ರಾಜ್ಯದಲ್ಲಿ ರೇಷನ್ ಕಾರ್ಡ್ ಹೊಂದಿದ್ದರೂ ಅಂಥವರು ಕಾರ್ಡ್, ಆಧಾರ್ ಸಂಖ್ಯೆ ನೀಡಿ ಬಯೋಮೆಟ್ರಿಕ್ನಲ್ಲಿ ಹೆಬ್ಬೆರಳಿನ ಗುರುತು ನೀಡುವ ಮೂಲಕ ರೇಷನ್ ಪಡೆಯಬಹುದು ಎಂದು ಇಲಾಖೆ ಆಯುಕ್ತೆ ಶ್ಯಾಮ್ಲಾ ಇಕ್ಬಾಲ್ ತಿಳಿಸಿದ್ದಾರೆ.