ಹೂವಿನಹಡಗಲಿ: ಪರಿಸರ ಉಳಿವು, ಮನೆಗೊಂದು ಶೌಚಗೃಹ ನಿರ್ಮಾಣ ಹಾಗೂ ಮಕ್ಕಳನ್ನು ಕೆಲಸಕ್ಕೆ ಕಳಿಸದಂತೆ ಜಾಗೃತಿ ಮೂಡಿಸಲು ತಾಲೂಕಿನ ಜಂಗಮಕ್ಷೇತ್ರ ಲಿಂಗನಾಯಕನಹಳ್ಳಿಯ ಶ್ರೀ ಚನ್ನವೀರ ಸ್ವಾಮೀಜಿಯವರು ಹಿರೇಬನ್ನಿಮಟ್ಟಿ ಗ್ರಾಮದಿಂದ ಹರವಿ ಗ್ರಾಮದವರೆಗೂ ಬುಧವಾರ ಪಾದಯಾತ್ರೆ ನಡೆಸಿದರು.
ಶ್ರೀ ಚನ್ನವೀರ ಸ್ವಾಮೀಜಿಯವರು ಹೊಳಲು ಪ್ರವೇಶಿಸುತ್ತಿದ್ದಂತೆಯೇ ಗ್ರಾಮದ ಸಕಲ ಸದ್ಭಕ್ತರು ಸ್ವಾಗತಿಸಿಕೊಂಡರು. ಮಹಿಳೆಯರು ಮನೆಯಂಗಳದಲ್ಲಿ ರಂಗೋಲಿ ಹಾಕಿ ಹೂವು ಹಾಕಿ ದೀಪ, ಧೂಪ ಹಚ್ಚುವ ಮೂಲಕ ಭಕ್ತಿ ಸಮರ್ಪಿಸಿದರು.
ಶ್ರೀಚನ್ನವೀರ ಸ್ವಾಮೀಜಿ ಮಾತನಾಡಿ, ಪರಿಸರ ಉಳಿವಿಗಾಗಿ ಪ್ರತಿಯೊಬ್ಬರೂ ಸಸಿ ನೆಟ್ಟು ಬೆಳೆಸಬೇಕು. ಶೌಚಗೃಹ ನಿರ್ಮಿಸಿಕೊಳ್ಳಲು ಹಾಗೂ ಮಕ್ಕಳಿಗೆ ಕೆಲಸಕ್ಕೆ ಕಳುಹಿಸದೆ ಸುಕ್ಷಿತರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು. ಕ್ಷೇತ್ರದ ಮೂಲ ಕತೃ ಶ್ರೀಚನ್ನವೀರ ಶಿವಯೋಗಿಗಳ 24ನೇ ವರ್ಷದ ಸ್ಮರಣೋತ್ಸವದ ಅಂಗವಾಗಿ ಜನ ಜಾಗೃತಿಗಾಗಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಹಾವೇರಿ ಜಿಲ್ಲೆ ಹಾವನೂರು ದಳವಾಯಿ ಮಠದ ಶಿವಕುಮಾರ ಸ್ವಾಮೀಜಿ, ಕೊಪ್ಪಳ ಜಿಲ್ಲೆ ಹಿರೇಸಿಂದೋಗಿಯ ಚಿದಾನಂದ ಸ್ವಾಮೀಜಿ ಸೇರಿದಂತೆ ಬನ್ನಿಮಟ್ಟಿ ಮಕರಬ್ಬಿ, ಹೌಸಿ, ಹಾಗೂ ಮೈಲಾರ ಹಾಗೂ ಸುತ್ತಲಿನ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿದ್ದರು.
ಬೆಳಗ್ಗೆ 6 ಗಂಟೆಯಿಂದ ಹೊರಟ ಪಾದಯಾತ್ರೆ ಹೌಸಿ, ಶಾಕಾರ, ಹೊಳಲು, ಮೈಲಾರ , ಕುರುವತ್ತಿ ಮಾರ್ಗವಾಗಿ ಹರವಿ ಗ್ರಾಮದಲ್ಲಿರುವ ಶ್ರೀಮಠವನ್ನು ತಲುಪಿ ಮಂಗಲಗೊಂಡಿತು.