ಹುಣಸೂರು: ಸಂಸ್ಕಾರಯುತ ಶಿಕ್ಷಣ ಇಂದಿನ ಮೂಲ ಅಗತ್ಯವಾಗಿದ್ದು, ಭವಿಷ್ಯದ ಪ್ರಜೆಗಳಿಗೆ ಶಿಕ್ಷಣ ಸಂಸ್ಥೆಗಳು ಅಕ್ಷರ ಕಲಿಸುವುದರೊಂದಿಗೆ ಉತ್ತಮ ಸಂಸ್ಕಾರವನ್ನೂ ಕಲಿಸುವ ಜವಾಬ್ದಾರಿ ಹೊಂದಿದೆ ಎಂದು ಶ್ರೀ ಆದಿಚುಂಚನಗಿರಿ ಮೈಸೂರು ಶಾಖಾಮಠದ ಶ್ರೀ ಸೋಮೇಶ್ವರನಾಥ ಸ್ವಾಮಿಗಳು ಅಭಿಪ್ರಾಯಪಟ್ಟರು.
ಪಟ್ಟಣದ ಆದಿಚುಂಚನಗಿರಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ 2020ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಪಠ್ಯಗಳೊಂದಿಗೆ ಪಠ್ಯೇತರ ಚಟುವಟಿಕೆಗಳನ್ನು ಅಳವಡಿಸಿರುವ ಮೂಲ ಉದ್ದೇಶ ವಿದ್ಯಾರ್ಥಿಗಳು ನಿಜ ಬದುಕನ್ನು ಅರಿಯಬೇಕು. ಸುತ್ತಲ ಪರಿಸರ, ಕ್ರಿಯಾಶೀಲತೆ, ಸಾಮಾನ್ಯ ಜ್ಞಾನ ಎಲ್ಲವೂ ಪಠ್ಯೇತರ ಚಟುವಟಿಕೆಗಳಿಂದ ಗಳಿಸಬಹುದಾಗಿದೆ. ಶಿಕ್ಷಣ ಸಂಸ್ಥೆಗಳು ಪಠ್ಯದೊಂದಿಗೆ ವಿದ್ಯಾರ್ಥಿಗಳಿಗೆ ಈ ನೆಲದ ಸಂಸ್ಕಾರ, ಸಂಸ್ಕೃತಿ, ಪದ್ಧತಿಗಳ ಅರಿವು ಮೂಡಿಸುವುದು ಅಷ್ಟೇ ಅಗತ್ಯ. ಇದರಿಂದ ಮಕ್ಕಳು ದೊಡ್ಡವರಾದ ಮೇಲೆ ಈ ನೆಲದ ಸಂಬಂಧವನ್ನು ಕಡಿದುಕೊಳ್ಳುವುದಿಲ್ಲ. ತಾಯಿಬೇರನ್ನು ಮರೆಯುವುದಿಲ್ಲ. ಈ ನಿಟ್ಟಿನಲ್ಲಿ ಪಾಶ್ಚಾತ್ಯ ಸಂಸ್ಕೃತಿಗೆ ಮನಸೋಲುತ್ತಿರುವ ವಿದ್ಯಾರ್ಥಿಗಳನ್ನು ನಮ್ಮ ಕಡೆಗೆ ತರಬೇಕಿದೆ ಎಂದರು.
ಪಟ್ಟಣ ಠಾಣೆ ಪಿಎಸ್ಐ ಮಹೇಶ್ ಮಾತನಾಡಿ, ಯುವಸಮೂಹ ದೇಶದ ಕಾನೂನು, ನೀತಿ ನಿಯಮಗಳನ್ನು ಪಾಲಿಸುವ ಪರಿಪಾಠ ಬೆಳೆಸಿಕೊಳ್ಳಬೇಕು. ಸಂಚಾರಿ ನಿಯಮಗಳ ಉಲ್ಲಂಘನೆಯಲ್ಲಿ ಯುವಕರ ಪಾತ್ರವೇ ದೊಡ್ಡದು. ಇದು ಸರಿಯಲ್ಲ. ಕಾನೂನುಗಳು ನಮ್ಮ ಅನುಕೂಲಕ್ಕಾಗಿ ಮಾಡಿರುವುದೇ ಹೊರತು ಅದರ ಉಲ್ಲಂಘನೆಗಾಗಿ ಅಲ್ಲ ಎನ್ನುವುದನ್ನು ತಿಳಿಯಬೇಕೆಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್ ಮಾತನಾಡಿದರು. ಆದಿಚುಂಚನಗಿರಿ ಚುಂಚನಕಟ್ಟೆ ಶಾಖಾಮಠದ ಶ್ರೀ ಶಿವಾನಂದ ಸ್ವಾಮಿಗಳು ಆಶೀರ್ವಚನ ನೀಡಿದರು. ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.