ಶಶಿಧರ ಕುಲಕರ್ಣಿ ಮುಂಡಗೋಡ
ಕಳೆದ ಬಾರಿಯ ಕರೊನಾ ಲಾಕ್ಡೌನ್ನಿಂದ ಆದ ನಷ್ಟದಿಂದ ಇನ್ನೂ ಮಾವಿನ ಹಣ್ಣಿನ ವ್ಯಾಪಾರಸ್ಥರು ಚೇತರಿಸಿಕೊಂಡಿಲ್ಲ. ಅದಾಗಲೇ ಜನತಾ ಕರ್ಫ್ಯೂ ಘೊಷಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ತಾಲೂಕಿನಲ್ಲಿ ಅತಿ ಹೆಚ್ಚು ಮಾವು ಬೆಳೆಯುವ ಪಾಳಾ ಭಾಗದ ಮಾವಿನ ಮರಗಳಲ್ಲಿ ಶೇ. 40ರಷ್ಟು ಮರಗಳಲ್ಲಿ ಮಾವಿನ ಕಾಯಿಗಳನ್ನು ತೆಗೆಯಲಾಗಿದೆ. ತೋಟಗಳಲ್ಲಿ ಇನ್ನೂ ಮಾವಿನ ಕಾಯಿಗಳು ಇವೆ. ಬಲಿತ ಮೇಲೆ ತೆಗೆಯಬೇಕೆಂದು ಬಿಟ್ಟ ಕಾಯಿಗಳು ಮರದಿಂದಲೇ ಉದುರಿ ಬಿದ್ದು ಹಾಳಾಗುತ್ತಿವೆ.
ವ್ಯಾಪಾರಸ್ಥರು ಕಳೆದ ತಿಂಗಳು ತೋಟಗಳನ್ನು ಗುತ್ತಿಗೆ ಹಿಡಿದಿದ್ದರು. ಆದರೆ, ಈಗ ಜನತಾ ಕರ್ಫ್ಯೂ ಘೊಷಣೆ ಆಗಿರುವುದರಿಂದ ಗ್ರಾಹಕರ ಸಂಖ್ಯೆ ತೀರಾ ಇಳಿಮುಖವಾಗಿ ವ್ಯಾಪಾರ ಆಗುತ್ತಿಲ್ಲ. ಹಣ್ಣುಗಳು ಶಿಲ್ಕು ಉಳಿದು ಬಹಳಷ್ಟು ಹಾಳಾಗುತ್ತಿವೆ. ದರವೂ ಕುಸಿದಿದೆ. ಬೇರೆ ಕಡೆಗೆ ವಿಶೇಷವಾಗಿ ಮಹಾರಾಷ್ಟ್ರ ರಾಜ್ಯಕ್ಕೆ ಕಳುಹಿಸುವುದರಿಂದ ಲಾಭ ಜಾಸ್ತಿಯಾಗುತ್ತಿತ್ತು. ಆದರೀಗ ಬೇರೆ ಕಡೆಗೂ ಕಳುಹಿಸಲು ಆಗುತ್ತಿಲ್ಲ.
ನಮ್ಮ ಮಳಿಗೆಗೆ ಪ್ರಯಾಣಿಕರು ಬಂದು ಹಣ್ಣುಗಳನ್ನು ಖರೀದಿಸುತ್ತಿದ್ದರು. ವ್ಯಾಪಾರ ಚೆನ್ನಾಗಿ ಆಗುತ್ತಿತ್ತು. ಜನತಾ ಕರ್ಫ್ಯೂ ಕಾರಣದಿಂದ ಬೆಳಗ್ಗೆ 6 ಗಂಟೆಯಿಂದ 12ರವರೆಗೆ ಎಂದರೆ ಅಷ್ಟು ಬೇಗ ಯಾರೂ ಗ್ರಾಹಕರು ಹಣ್ಣುಗಳ ಖರೀದಿಗೆ ಬರುವುದಿಲ್ಲ. 12ರ ನಂತರ ಅಂಗಡಿಗಳನ್ನು ಮುಚ್ಚಬೇಕಾಗುತ್ತದೆ. ಹೀಗಾಗಿ ಹಣ್ಣುಗಳು ಉಳಿದು ಹಾಳಾಗುತ್ತಿವೆ.
| ಮುಬಾರಕ್ ಚೋಪ್ದಾರ್, ಮಾವಿನ ಹಣ್ಣಿನ ವ್ಯಾಪಾರಿ
ಪ್ರತಿ ಬಾರಿಯಂತೆ ಮಂಡಿಗೆ ಅಷ್ಟೇನೂ ಹೆಚ್ಚಿನ ಪ್ರಮಾಣದಲ್ಲಿ ಮಾವಿನಕಾಯಿಗಳು ಬರುತ್ತಿಲ್ಲ. ಇನ್ನೂ ಮರಗಳಲ್ಲಿ ಕಾಯಿ ಪೂರ್ತಿಯಾಗಿ ತೆಗೆದಿಲ್ಲ. ಹೀಗಾಗಿ ಇನ್ನು ಮುಂದೆಯೂ ಕಾಯಿಗಳು ಬರಬಹುದು.
| ನಾಗನಗೌಡ ಶಿವನಗೌಡ್ರು
ಮಂಡಿಯ ಮಾಲೀಕ