ಹುಬ್ಬಳ್ಳಿ: ಗಣೇಶೋತ್ಸವ ಹಿನ್ನೆಲೆಯಲ್ಲಿ ಎಪಿಎಂಸಿ&- ನವನಗರ ಠಾಣೆ ಪೊಲೀಸರು ಭಾನುವಾರ ರೌಡಿ ಪರೇಡ್ ನಡೆಸಿದರು. ಹಬ್ಬದ ಸಂದರ್ಭದಲ್ಲಿ ಬಾಲ ಬಿಚ್ಚದಂತೆ ಎಚ್ಚರಿಕೆ ನೀಡಿದರು.
ಹಬ್ಬದ ಹಿನ್ನೆಲೆಯಲ್ಲಿ ಇನ್ಸ್ಪೆಕ್ಟರ್ ಬಿ.ಎಸ್. ಮಂಟೂರ ಬೆಳ್ಳಂಬೆಳಗ್ಗೆ ರೌಡಿಗಳನ್ನು ಠಾಣೆಗೆ ಕರೆಸಿದ್ದರು. ಎಲ್ಲರನ್ನೂ ಸಾಲಾಗಿ ನಿಲ್ಲಿಸಿ ಪ್ರತ್ಯೇಕವಾಗಿ ಸ್ವವಿವರ ಪಡೆದರು. ಹಬ್ಬದ ಸಂದರ್ಭದಲ್ಲಿ ಶಾಂತಿಗೆ ಭಂಗ ಉಂಟು ಮಾಡಬಾರದು. ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು 82 ರೌಡಿಗಳಿಂದ ಮುಚ್ಚಳಿಕೆ ಬರೆಸಿಕೊಂಡರು.
ಶಾಂತಿ ಸಭೆ :
ಗಣೇಶ ಹಬ್ಬದ ಅಂಗವಾಗಿ ಠಾಣೆಯಲ್ಲಿ ಭಾನುವಾರ ಶಾಂತಿ ಸಭೆ ನಡೆಸಲಾಯಿತು. ಠಾಣೆ ವ್ಯಾಪ್ತಿಯ ವಿವಿಧ ಧರ್ಮಗಳ ಮುಖಂಡರು, ಗಣ್ಯರು ಪಾಲ್ಗೊಂಡಿದ್ದರು. ಶಾಂತಿಯುತವಾಗಿ, ಸರ್ಕಾರದ ಮಾರ್ಗಸೂಚಿಅ ನ್ವಯ ಹಬ್ಬ ಆಚರಿಸಲು ಎಲ್ಲರೂ ಸಹಕರಿಸುವಂತೆ ಇನ್ಸ್ಪೆಕ್ಟರ್ ಬಿ.ಎಸ್.ಮಂಟೂರ ಅವರು ಮನವಿ ಮಾಡಿದರು. ಪಾಲಿಕೆ ಸದಸ್ಯೆ ಸುನಿತಾ ಮಾಳವದಕರ, ಪಾಲಿಕೆ ಸಹಾಯಕ ಆಯುಕ್ತ ರಮೇಶ ನೂಲ್ವಿ, ಪಿಎಸ್ಐಗಳಾದ ಬಿ.ಎನ್.ಸಾತಣ್ಣವರ, ಆರ್.ಎಚ್.ಮಾಣಿಕನವರ, ಟಿ.ಎಸ್.ತಲವಾಯಿ, ಇತರರಿದ್ದರು.