ಹುಬ್ಬಳ್ಳಿ: ಬೈಪಾಸ್ ರಸ್ತೆ ಹಾಗೂ ಡಾಬಾಗಳ ಬಳಿ ನಿಂತ ಲಾರಿಗಳಲ್ಲಿ ಇಟ್ಟಿದ್ದ ಮೊಬೈಲ್ ಫೋನ್ಗಳನ್ನು ಕದಿಯುತ್ತಿದ್ದ ಖತರ್ನಾಕ್ ಕಳ್ಳನನ್ನು ಉಪನಗರ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಆತನಿಂದ 1,72,000 ರೂ. ಮೌಲ್ಯದ 9 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಹೆಗ್ಗೇರಿ ಮಾರುತಿ ನಗರ 1ನೇ ಕ್ರಾಸ್ ನಿವಾಸಿ, ಆಟೋ ಚಾಲಕ ರಫೀಕ ಫತ್ತೇಸಾಬ್ ಧಾರವಾಡ (35) ಬಂಧಿತ ಆರೋಪಿ. ಲಾರಿಗಳನ್ನೇ ಗುರಿಯಾಗಿಸಿಕೊಂಡಿದ್ದ ರಫೀಕ, ಡಾಬಾ ಬಳಿ ಹಾಗೂ ರಸ್ತೆಬದಿ ನಿಂತಿರುವ ಲಾರಿಗಳನ್ನು ಹುಡುಕುತ್ತಿದ್ದ. ಚಾಲಕ-ಕ್ಲೀನರ್ಗಳು ಲಾರಿಯಲ್ಲಿ ಮೊಬೈಲ್ಫೋನ್ ಇಟ್ಟಿದ್ದರೆ ಕ್ಷಣಾರ್ಧದಲ್ಲಿ ಕದ್ದು ಪರಾರಿಯಾಗುತ್ತಿದ್ದ.
ನ್ಯೂ ಕಾಟನ್ ಮಾರ್ಕೆಟ್ನಲ್ಲಿ ಲಾರಿಯೊಂದರ ಎಡಭಾಗದ ಗ್ಲಾಸ್ ರಬ್ಬರ್ಅನ್ನು ಬ್ಲೇಡ್ನಿಂದ ಕತ್ತರಿಸಿ, ಗ್ಲಾಸ್ ತೆಗೆದು ಬ್ಯಾನಟ್ ಮೇಲೆ ಇಟ್ಟಿದ್ದ ದುಬಾರಿ ಬೆಲೆಯ ಐಫೋನ್ ಕದ್ದು ಪರಾರಿಯಾಗಿದ್ದ. ಆ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜನತಾ ಬಜಾರ್ನಲ್ಲಿ ಅಂಗಡಿ ಕಳ್ಳತನ ಹಾಗೂ ಬೈಕ್ ಕಳ್ಳತನ ಪ್ರಕರಣದಲ್ಲಿ ಇತ್ತೀಚೆಗೆ ಬಂಧಿಸಲ್ಪಟ್ಟಿದ್ದ ವಿಜಯ ಬೆಂಡಿಗೇರಿ ಜತೆಯೂ ಈತ ಭಾಗಿಯಾಗಿದ್ದ ಎಂದು ವಿಚಾರಣೆ ವೇಳೆ ಗೊತ್ತಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇನ್ಸ್ಪೆಕ್ಟರ್ ಎಸ್.ಕೆ. ಹೊಳೆಯಣ್ಣವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್ಐ ಸೀತಾರಾಮ ಲಮಾಣಿ, ಸಿಬ್ಬಂದಿ ಸುನೀಲ ಪಾಂಡೆ, ಮಲ್ಲಿಕಾರ್ಜುನ ಧನಿಗೊಂಡ, ಮಂಜುನಾಥ ಯಕ್ಕಡಿ, ಉಮೇಶ ಹೆದ್ದೇರಿ, ರವಿ ಹೊಸಮನಿ, ರೇಣು ಸಿಕ್ಕಲಗೇರ, ಮಾಬುಸಾಬ್ ಮುಲ್ಲಾ, ಮಂಜು ಕಮತದ ಪಾಲ್ಗೊಂಡಿದ್ದರು.