ಹುಬ್ಬಳ್ಳಿ: ಕಾಲೇಜಿನ ವಿದ್ಯಾರ್ಥಿಗಳು ಮತ್ತು ಯುವ ಉದ್ಯಮಿಗಳ ಸ್ಟಾರ್ಟ್ಪ್ಗಳಿಗೆ ಕೆಎಲ್ಇ ಸಿಟಿಐಇನಿಂದ ಸೂಕ್ತ ಮಾರ್ಗದರ್ಶನ, ಆರ್ಥಿಕ ನೆರವು, ತಾಂತ್ರಿಕ ಸಹಾಯ ನೀಡಿ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಕೆಎಲ್ಇ ಸಿಟಿಐಇ ನಿರ್ದೇಶಕ ಶಿವಯೋಗಿ ತುರಮರಿ ಹೇಳಿದರು.
ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ (ಐಎಲ್ವೈಎಫ್) ವತಿಯಿಂದ ವಿದ್ಯಾನಗರದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಆವರಣದಲ್ಲಿ ವೀರಶೈವ ಲಿಂಗಾಯತ ಜಾಗತಿಕ ಉದ್ಯಮ ಸಮಾವೇಶ-2024ದಲ್ಲಿ ಶನಿವಾರ ಬೆಳಗ್ಗೆ ಏರ್ಪಡಿಸಿದ್ದ ನವೋದ್ಯಮಗಳು ವಿಷಯದ ಕುರಿತ ಚರ್ಚೆಯಲ್ಲಿ ಅವರು ಮಾತನಾಡಿದರು.
ಸ್ಟಾರ್ಟಪ್ಗಳಿಗೆ ಕೆಎಲ್ಇ ಸಿಟಿಐಇನಲ್ಲಿರುವ ಪ್ರಯೋಗಾಲಯ, ಗ್ರಂಥಾಲಯ, ಉದ್ಯಮ ಮಾರ್ಗದರ್ಶನ, ಕೈಗಾರಿಕೆ ನೆರವು, ಸಂಬಂಧಿಸಿದ ಕೈಗಾರಿಕೆಗಳ ಒಪ್ಪಂದದಂತೆ ತಯಾರಿಸಿದ ವಸ್ತುಗಳು ಮಾರಾಟ, ಅಭಿವೃದ್ಧಿಗೆ, ಸಾರಿಗೆ ವ್ಯವಸ್ಥೆ ಹೀಗೆ ಎಲ್ಲ ರೀತಿಯ ಅನುಕೂಲ ಕಲ್ಪಿಸಿ, ಉತ್ತರ ಕರ್ನಾಟಕದ ಕೈಗಾರಿಕೆಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.
15 ವರ್ಷಗಳ್ಲಲಿ ಅಂದಾಜು 150 ಸ್ಟಾರ್ಟ್ಪ್ಗಳು ನೋಂದಣಿ ಆಗಿದ್ದು, ಸದ್ಯ 60 ಸ್ಟಾರ್ಟಪ್ಗಳಿವೆ. ಭಾರತ ಸರ್ಕಾದ ಮೂರ್ನಾಲ್ಕು ಇಲಾಖೆಗಳಿಂದ ಆರ್ಥಿಕ ನೆರವು ನೀಡಲಾಗುತ್ತಿದೆ. ಈವರೆಗೆ 2500 ಮಂದಿಗೆ ಉದ್ಯೋಗ, 5 ಸಾವಿರ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ದೊರೆತಿದೆ ಎಂದರು.
ಡಿಫೆನ್ಸ್ ಸ್ಟಾರ್ಟಪ್ನ ಅಂಕುಶ ಕೊರವಿ ಮಾತನಾಡಿ, ನಮ್ಮ ಕಂಪನಿಯಲ್ಲಿ ತಯಾರಿಸಿದ ಪಿಸ್ತೂಲ್, ರೈಫಲ್ಗಳನ್ನು ಹೊರರಾಜ್ಯಗಳಿಗೆ ಕಳುಹಿಸಲಾಗುತ್ತಿದೆ. ಈ ವೇಳೆ ಜಿಲ್ಲಾಡಳಿತ ಬೇಗ ಪರವಾನಗಿ ನೀಡಬೇಕು ಎಂದರು.
ಬೆಳಗಾವಿ ಇನೋವೇಟಿವ್ ಮೆಡಿಕಲ್ ಡಿವೈಸಸ್ ಸ್ಟಾರ್ಟಪ್ನ ಲೈಫ್ಟ್ರಾನ್ಸ್ನ ಡಾ. ಕಿರಣ ಕಂಠಿ, ರಿವೋಟ್ ಮೋಟಾರ್ಸ್ನ ಅಜಿತ ಪಾಟೀಲ, ಸ್ಪಾಟರ್ ಮೊಬಿಲಿಟಿಯ ಅರುಣ ಅಗಡಿ, ಪ್ರಸಾದ ಪಾಟೀಲ ಹಾಗೂ ಎಐ ಆಧಾರಿತ ಟ್ರಾಫಿಕ್ ಮ್ಯಾನೇಜ್ಮೆಂಟ್ ಸ್ಟಾರ್ಟ್ಅಪ್ನ ಅಗಸ್ತ್ಯ ಬೆಲ್ಲದ, ಚನ್ನು ಹೊಸಮನಿ ತಮ್ಮ ಕಂಪನಿಯ ಸ್ಥಾಪನೆ, ಕಾರ್ಯನಿರ್ವಹಣೆ ಬಗ್ಗೆ ವಿವರಿಸಿದರು.
ಮೈಸೂರಿನ ಐಎಲ್ಎಫ್ ಚಾಪ್ಟರ್ನ ಪ್ರಶಾಂತ ಬಿ.ಎಸ್., ಮಾತನಾಡಿ, ಐಎಲ್ಎಫ್ನಿಂದಾಗಿ ನನ್ನ ವ್ಯಾಪಾರ ವೃದ್ಧಿಸಿದೆ. ಆದಾಯವೂ ಗಣನಿಯವಾಗಿ ಏರಿಕೆಯಾಗಿದೆ. ಹೀಗಾಗಿ, ವೀರಶೈವ ಲಿಂಗಾಯತ ಸಮಾಜದಿಂದ ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಹಾಯಧನ, ಮತ್ತಿತರ ಸಾಮಾಜಿಕ ಚಟುವಟಿಕೆಗೆ ಆರ್ಥಿಕ ಸಹಾಯ ಮಾಡಲಾಗುತ್ತಿದೆ ಎಂದರು.
ಅವಿನಾಶ ಪಳ್ಳೇಗಾರ, ಸಮಾವೇಶದ ಮುಖ್ಯ ಸಂಚಾಲಕ ಸಂತೋಷ ಕೆಂಚಾಂಬ, ರಮೇಶ ಪಾಟೀಲ, ರವಿರಾಜ ಕಮ್ಮಾರ, ಶಶಿಧರ ಶೆಟ್ಟರ್, ಸಿದ್ದು ಮಠದ, ಮೈಸೂರಿನ ಧರ್ಮಪ್ರಸಾದ ಇದ್ದರು.