ಇಸ್ಲಾಮಾಬಾದ್: ಜಾಗತಿಕವಾಗಿ ಕ್ರೀಡೆಯ ಮೇಲೆ ಕರೊನಾ ವೈರಸ್ ಕೆಂಗಣ್ಣು ಬೀರಿರುವುದರಿಂದ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಅಸಮಾಧಾನಗೊಂಡಿದ್ದು, ಚೀನಾ ಜನರ ಆಹಾರ ಹವ್ಯಾಸದ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
ಕರೊನಾ ಕರಿನೆರಳಿನಿಂದ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಪಂದ್ಯಗಳನ್ನು ಕಡಿತಗೊಳಿಸಲಾಗಿದೆ. ಅಲ್ಲದೆ, ಐಪಿಎಲ್ ಟೂರ್ನಿಯನ್ನು ಮುಂದೂಡಲಾಗಿದೆ. ಪಿಎಸ್ಎಲ್ನಲ್ಲಿ ಸೆಮಿಫೈನಲ್ ಮತ್ತು ಫೈನಲ್ ಸೇರಿ ಬಾಕಿ ಉಳಿದಿರುವ ಪಂದ್ಯಗಳನ್ನು ಖಾಲಿ ಕ್ರೀಡಾಂಗಣದಲ್ಲಿ ನಡೆಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಶುಕ್ರವಾರ ನಿರ್ಧರಿಸಿದೆ.
ಇದಕ್ಕೆಲ್ಲಾ ಕಾರಣ ಕರೊನಾ. ಆದರೆ, ಕರೊನಾ ಸ್ಪೋಟಗೊಳ್ಳಲು ಚೀನಿಯರು ಕಾರಣವಾಗಿರುವುದರಿಂದ ಅವರ ವಿರುದ್ಧ ಅಖ್ತರ್ ಯಾರ್ಕರ್ ಎಸೆದಿದ್ದಾರೆ. ಹಲವು ದಿನಗಳ ಬಳಿಕ ಪಾಕಿಸ್ತಾನಕ್ಕೆ ಕ್ರಿಕೆಟ್ ಮರಳಿದೆ. ಕಠಿಣ ಸಮಯದಲ್ಲೂ ಮೊದಲ ಬಾರಿಗೆ ನಮ್ಮ ದೇಶದಲ್ಲಿ ಪಿಎಸ್ಎಲ್ ನಡೆಯುತ್ತಿದೆ ಎಂದು ತಮ್ಮದೇ ಯೂಟ್ಯೂಬ್ ಚಾನೆಲ್ ಹೇಳಿಕೊಂಡಿದ್ದಾರೆ.
ಮುಂದುವರಿದು ಮಾತನಾಡಿರುವ ಅಖ್ತರ್ ಚೀನಿಯರ ಆಹಾರ ಹವ್ಯಾಸದ ವಿರುದ್ಧ ಕಿಡಿಕಾರಿದ್ದು, ನಿಮ್ಮ ಹವ್ಯಾಸ ವಿಶ್ವವನ್ನೇ ಅಪಾಯಕ್ಕೆ ನೂಕುತ್ತಿದೆ ಎಂದು ಆರೋಪಿಸಿದ್ದಾರೆ.
ಬಾವಲಿಯಂತಹ ಜೀವಿಗಳನ್ನು ತಿನ್ನುವುದಲ್ಲದೆ, ಅದರ ರಕ್ತ ಮತ್ತು ಮೂತ್ರವನ್ನು ಅದ್ಹೇಗೆ ಕುಡಿಯುತ್ತಾರೆಂದು ನನಗೆ ಅರ್ಥವಾಗುತ್ತಿಲ್ಲ. ಈ ಮೂಲಕ ಜಾಗತಿಕವಾಗಿ ಕೆಲವು ವೈರಸ್ಗಳನ್ನು ಹರಡುತ್ತಿದ್ದಾರೆ. ಈ ಜನ ವಿಶ್ವವನ್ನೇ ಅಪಾಯದಲ್ಲಿ ಇಡುತ್ತಿದ್ದಾರೆ. ಬಾವಲಿ, ನಾಯಿ ಮತ್ತು ಬೆಕ್ಕುಗಳನ್ನೇಕೆ ತಿನ್ನುತ್ತಾರೆ ಎಂಬುದು ನಿಜಕ್ಕೂ ಅರ್ಥವಾಗುತ್ತಿಲ್ಲ. ನನಗೆ ಕೋಪ ಬರುತ್ತಿದೆ ಎಂದಿದ್ದಾರೆ.
ಇಡೀ ವಿಶ್ವವೇ ಇಂದು ಸಂಕಷ್ಟದಲ್ಲಿದೆ. ಪ್ರವಾಸೋದ್ಯಮದ ಮೇಲೆ ತೀವ್ರ ಪರಿಣಾಮ ಬೀರಿದೆ. ಆರ್ಥಿಕ ವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ. ವಿಶ್ವವೇ ಬಂದ್ ವಾತಾವರಣ ಕಡೆಗೆ ಸಾಗುತ್ತಿದೆ. ನಾನಿಲ್ಲಿ ಚೀನಿಯರ ವಿರುದ್ಧವಾಗಿ ಮಾತನಾಡುತ್ತಿಲ್ಲ. ನಾನು ಅಲ್ಲಿನ ಪ್ರಾಣಿ ಕಾಯ್ದೆಗೆ ವಿರುದ್ಧವಾಗಿದ್ದೇನೆ. ಇದು ನಿಮ್ಮ ಸಂಸ್ಕೃತಿಯೇ ಆಗಿರಬಹುದು. ಆದರೆ, ಇದು ನಿಮಗೆ ಲಾಭದಾಯಕವಾಗುತ್ತಿಲ್ಲ. ಬದಲಾಗಿ ಮಾನವೀಯತೆಯನ್ನೇ ಕೊಲ್ಲುತ್ತಿದೆ. ಚೀನಿಯರನ್ನು ಬಹಿಷ್ಕರಿಸಿ ಎಂದು ಹೇಳುತ್ತಿಲ್ಲ. ಆದರೆ, ಕೆಲವೊಂದು ಕಾನೂನುಗಳಿವೆ ಎಂಬುದನ್ನು ಅರಿಯಬೇಕು. ಎಲ್ಲವನ್ನು ತಿನ್ನುತ್ತೇನೆ ಎಂದು ಹೋಗಬಾರದೆಂದು ಅಖ್ತರ್ ಹೇಳಿದ್ದಾರೆ. (ಏಜೆನ್ಸೀಸ್)
ಡೆಡ್ಲಿ ಕರೊನಾ ಭೀತಿಯ ಬಗ್ಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕನ್ನಡಿಗ ರಾಹುಲ್ ಹೇಳಿದ್ದು ಹೀಗೆ…