ಬೆಳ್ತಂಗಡಿ: ವಿಜಯವಾಣಿಯಲ್ಲಿ ಅ.9ರಂದು ಕಲಿಕೆಗಾಗಿ ವಿದ್ಯುತ್ ಬಯಸಿ ಮನೆ ಮನೆ ಅಲೆಯುತ್ತಿದ್ದಾರೆ ಮಕ್ಕಳು, ‘ದಲಿತ ಕುಟುಂಬಕ್ಕಿಲ್ಲ ನಿವೇಶನ’ ಎಂಬ ಶೀರ್ಷಿಕೆಯಡಿ ಲೇಖನ ಪ್ರಕಟವಾಗಿದ್ದ ವರದಿ ಬೆಳ್ತಂಗಡಿ ತಾಪಂ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು.
ದಿವ್ಯಜ್ಯೋತಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ತಾಪಂ ಸದಸ್ಯ ಸುಧಾಕರ್ ಎಲ್., ಪಜಿರಡ್ಕದಲ್ಲಿ ದಲಿತ ಕುಟುಂಬಗಳಿಗೆ ನಿವೇಶನ ಇಲ್ಲದೆ ಸರ್ಕಾರದ ಸೌಲಭ್ಯ ಸಿಗುತ್ತಿಲ್ಲ. ಮಕ್ಕಳಿಗೆ ಆನ್ಲೈನ್ ಪಾಠಕ್ಕೆ ಮೊಬೈಲ್ ಚಾರ್ಜ್ ಮಾಡಲು ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ. ಈ ಬಗ್ಗೆ ‘ವಿಜಯವಾಣಿ’ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದು, ತಕ್ಷಣ ಕಂದಾಯ ಇಲಾಖೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ್ ಮಹೇಶ್ ಜಿ. ಪ್ರತಿಕ್ರಿಯಿಸಿ, ಈಗಾಗಲೇ ತಾಲೂಕಿನಲ್ಲಿರುವ 60 ಎಕರೆ ಡಿ.ಸಿ ಮನ್ನಾ ಭೂಮಿ ಅಳತೆಯಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ, ನಂತರ ನಿವೇಶನ ಮಂಜೂರಾಗುವುದು ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಇದು ನಿಧಾನಗತಿಯಲ್ಲಿ ನಡೆದರೆ ಈ ಕುಟುಂಬಗಳಿಗೆ ನ್ಯಾಯ ಸಿಗಲು ತೊಂದರೆಯಾಗುತ್ತದೆ. ಪ್ರಥಮ ಆದ್ಯತೆಯಾಗಿ ಪಜಿರಡ್ಕ ಭಾಗದ ಡಿಸಿ ಮನ್ನಾ ಭೂಮಿಯನ್ನು ಅಳತೆ ಮಾಡಿ ಈ ಕುಟುಂಬಗಳಿಗೆ ಹಂಚಲು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.