More

    ನೀರಿನ ಮಿತಬಳಕೆಯ ಜಾಗೃತಿ ಅಗತ್ಯ; ಕ.ರಾ.ಗ್ರಾ.ಪಂ. ವಿವಿ ಕುಲಪತಿ ಪ್ರೊ.ವಿಷ್ಣುಕಾಂತ ಚಟಪಲ್ಲಿ ಅಭಿಪ್ರಾಯ; ವಿಚಾರ ಸಂಕಿರಣದ ಸಮಾರೋಪ

    ಹೊಸಪೇಟೆ: ಜಲಸಂರಕ್ಷಣೆ ಕುರಿತು ಜನರ ಮನಪರಿವರ್ತನೆ ಬಹುಮುಖ್ಯವಾಗಿದ್ದು, ವ್ಯಕ್ತಿ, ಕುಟುಂಬ ಮತ್ತು ಸಮಾಜದ ಹಂತದಲ್ಲಿ ನೀರಿನ ಸದ್ಬಳಕೆ, ಮಿತಬಳಕೆ ಬಗ್ಗೆ ಜಾಗೃತಿ ಮೂಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿಷ್ಣುಕಾಂತ ಚಟಪಲ್ಲಿ ಅಭಿಪ್ರಾಯಪಟ್ಟರು.

    ದೆಹಲಿಯ ದೀನದಯಾಳ ಸಂಶೋಧನಾ ಕೇಂದ್ರ, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಮತ್ತು ಕನ್ನಡ ವಿಶ್ವವಿದ್ಯಾಲಯ ಸಹಯೋಗದಲ್ಲಿ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಸುಜಲಂ ಜಲತತ್ವ ಕುರಿತ ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದರು.

    ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ. ರಮೇಶ ಮಾತನಾಡಿ, ಪಂಚಭೂತಗಳಲ್ಲಿ ನೀರು ಅತ್ಯಂತ ಶೇಷ್ಠ. ನಮ್ಮ ಎಲ್ಲ ಆಚರಣೆ, ಸಂಪ್ರದಾಯಗಳು ನೀರನ್ನು ಒಳಗೊಂಡಿವೆ. ನದಿಗಳಿಗೆ ಕಲ್ಮಶಗಳನ್ನು ಸೇರಿಸುವುದು ನಿಲ್ಲಬೇಕು. ನೀರನ್ನು ಹಿತ-ಮಿತವಾಗಿ ಬಳಸುವುದನ್ನು ಕಲಿತುಕೊಳ್ಳಬೇಕು ಎಂದರು.

    ಕೊಲ್ಲಾಪುರದ ಸಿದ್ಧಗಿರಿ ಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಸಾವಿರಾರು ವರ್ಷಗಳಿಂದ ಜೀವ ಸಂಕುಲವನ್ನು ಕಾಪಾಡಿಕೊಂಡಿರುವ ನೀರನ್ನು ಇಂದು ವಿಜ್ಞಾನ-ತಂತ್ರಜ್ಞಾನ, ಆಧುನೀಕರಣ ಭರದಲ್ಲಿ ಕೇವಲ 30 ವರ್ಷಗಳಲ್ಲಿ ಹಿಂದೆಂದೂ ಆಗಿರದಷ್ಟು ನೀರನ್ನು ಮಲೀನಗೊಳಿಸಿದ್ದೇವೆ ಎಂದರು.

    ನವದೆಹಲಿಯ ದೀನದಯಾಳ ಸಂಶೋಧನಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅತುಲ್ ಜೈನ್ ಮಾತನಾಡಿದರು. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಡಾ.ಸಿದ್ದು ಪಿ.ಅಲಗೂರು, ಕುಲಸಚಿವ ಡಾ.ಎಸ್.ಸಿ ಪಾಟೀಲ್, ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ.ಸುಬ್ಬಣ್ಣ ರೈ, ವಿವಿಧ ರಾಜ್ಯಗಳ ಸಂಪನ್ಮೂಲ ವ್ಯಕ್ತಿಗಳು, ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts