ಹೊಸಪೇಟೆ: ಇಲ್ಲಿನ ಜನರ ಬಹದಿನಗಳ ಬೇಡಿಕೆಯಾಗಿದ್ದ ಹಂಪಿ ಸಕ್ಕರೆ ಕಾರ್ಖಾನೆಗೆ ಡಿಸೆಂಬರ್ ಅಥವಾ ಜನವರಿಯಲ್ಲಿ ಅಡಿಗಲ್ಲು ಹಾಕಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದರು. ಇತ್ತೀಚೆಗ ಬೆಂಗಳೂರಿನಲ್ಲಿ ನಡೆದ ಗ್ಲೋಬಲ್ ಇನ್ವೆಸ್ಟ್ಮೆಂಟ್ ಮೀಟ್ನಲ್ಲಿ ಈ ಕುರಿತು ಅಗ್ರಿಮೆಂಟ್ ಆಗಿದೆ. ದಾವಣಗೆರೆ ಸಂಸದ ಜೆ.ಎಂ.ಸಿದ್ದೇಶ್ವರ ಮಾಲೀಕತ್ವದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗಲಿದೆ. ಅವರು ಈ ಹಿಂದೆ ಜಿ.ಎಂ.ಶುಗರ್ಸ್ ಎಂಬ ಹೆಸರಲ್ಲಿ ಕಾರ್ಖಾನೆ ಆರಂಭಿಸಲು ಮುಂದಾಗಿದ್ದರು. ಆದರೆ, ನನ್ನ ಸಲಹೆ ಮೇರೆಗೆ ಐತಿಹಾಸಿಕ ಹಂಪಿ ಶುಗರ್ಸ್ ಹೆಸರಲ್ಲಿ ಆರಂಭಿಸುತ್ತಿದ್ದಾರೆ. ವಿಜಯನಗರದ ರಾಜಧಾನಿ ಹಂಪಿ ಹೆಸರಿಟ್ಟರೆ ಬ್ರ್ಯಾಂಡ್ ಸಿಗುತ್ತದೆ. ಈ ಭಾಗದ ಭಾವನಾತ್ಮಕ ಸಂಬಂಧದೊಂದಿಗೆ ಬೆಸೆಯುತ್ತದೆ ಎಂದರು.
ಹೊಸಪೇಟೆ ನಗರದಲ್ಲಿ ಸರ್ಕಾರಿ ಜಾಗೆ ಒತ್ತುವರಿಗೆ ಸಂಬಂಧಿಸಿದ ಹೈಕೋರ್ಟ್ 8 ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಹೈಕೋರ್ಟ್ನಲ್ಲಿ ದಾಖಲಾಗಿರುವ ಪಿಐಎಲ್ನಲ್ಲಿ ನನ್ನನ್ನು ಪಾರ್ಟಿ ಮಾಡಿಲ್ಲ. ಅಧಿಕಾರಿಗಳನ್ನು ಮಾತ್ರ ಸೇರಿಸಿದ್ದಾರೆ. ಅಧಿಕಾರಿಗಳಿಗೆ ಮಾತ್ರ ನೋಟಿಸ್ ಬಂದಿದ್ದು, ಅವರು ಉತ್ತರಿಸುತ್ತಾರೆ ಎಂದಷ್ಟೇ ಹೇಳಿದರು.