ಹೊಸಪೇಟೆ: ಬಡವರ ಕುರಿತು ಸಚಿವ ಉಮೇಶ ಕತ್ತಿ ಹೇಳಿಕೆ ಖಂಡಿಸಿ, ಅವರ ಭಾವಚಿತ್ರ ಸುಡುವ ಮೂಲಕ ನಗರದಲ್ಲಿ ಗುರುವಾರ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಆಕ್ರೋಶ ವ್ಯಕ್ತಪಡಿಸಿತು. ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ.ಆರ್.ಭರತ್ ಕುಮಾರ್ ಮಾತನಾಡಿ, ಬೇಜವಾಬ್ದಾರಿಯುತ ಹೇಳಿಕೆ ನೀಡಿರುವ ಸಚಿವರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿದರು. ಸಮಿತಿ ಉಪಾಧ್ಯಕ್ಷೆ ಆಯಿಷಾ ಬೇಗಂ, ಕಾರ್ಯಕರ್ತರಾದ ಮೆಹಬೂಬ್ಬಾಷಾ, ಚರಣ್, ಕೇಶವ, ದೇವರಾಜ, ಸುಭಾನಿ ಇದ್ದರು.
ಕಂಪ್ಲಿ: ಅಕ್ಕಿ ಜೋಳ ಕೇಳಿದವರಿಗೆ ಸತ್ತು ಹೋಗಿ ಎನ್ನುವ ಆಹಾರ ಸಚಿವ ಉಮೇಶ್ ಕತ್ತಿರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಗುರುವಾರ ತಹಸೀಲ್ದಾರ್ ಗೌಸಿಯಾ ಬೇಗಂಗೆ ಮನವಿ ಸಲ್ಲಿಸಿತು.
ಸಮಿತಿ ಅಧ್ಯಕ್ಷ ಆರ್.ಪಿ.ಶಶಿಕುಮಾರ್ ಮಾತನಾಡಿ, ಕರೊನಾ ಸಂಕಷ್ಟ ಸಮಯದಲ್ಲಿ ಪಡಿತರ ಕಡಿತಗೊಳಿಸುವ ಮೂಲಕ ರಾಜ್ಯ ಸರ್ಕಾರ ಜನಹಿತ ಕಡೆಗಣಿಸಿದೆ. ವೈದ್ಯಕೀಯ ಆಕ್ಸಿಜನ್ ಮತ್ತು ಹಾಸಿಗೆಗಳ ವ್ಯವಸ್ಥೆಯಿಲ್ಲದೆ ಕರೊನಾ ಸೋಂಕಿತರು ಬೀದಿ ಹೆಣವಾಗುತ್ತಿದ್ದಾರೆ. ಕರೊನಾದಿಂದ ಮರಣ ಹೊಂದಿದವರ ಅಂತ್ಯಸಂಸ್ಕಾರಕ್ಕೆ ಹಣ ಮೀಸಲು ಇಡುವ ಸರ್ಕಾರ ಬದುಕಿದ ಜನರ ಕಾಳಜಿ ತೋರುತ್ತಿಲ್ಲ. ರಾಜ್ಯದಲ್ಲಿ ಕರೊನಾ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಟಗಿ ಬಸವರಾಜಗೌಡ, ಎನ್ಎಸ್ಯುಐ ನಗರ ಅಧ್ಯಕ್ಷ ಅಮಿತ್ಗೌಡ, ಪ್ರಮುಖರಾದ ಹಬೀಬ್ ರೆಹಮಾನ್, ಸೈಯದ್ ಉಸ್ಮಾನ್, ವೀರೇಶ್, ಗೋಪಿ, ಇಮ್ಯಾನ್ಯುಯಲ್, ಕಂಚಿ ಮಾಳಪ್ಪ, ರಾಜಭಕ್ಷಿ, ರಾಮು, ಪ್ರಮೋದ್, ನಾಗರಾಜ ಇತರರಿದ್ದರು.