ಹೊಸಪೇಟೆ: ವಿಜಯನಗರ ಜಿಲ್ಲೆ ನೂತನ ಡಿಸಿ, ಎಸ್ಪಿ ಹಾಗೂ ಸಿಇಒ ಕಚೇರಿ, ಮೆಡಿಕಲ್ ಕಾಲೇಜ್ ಕಟ್ಟಡ ಸೇರಿ ಜಿಲ್ಲಾಮಟ್ಟದ ಎಲ್ಲ ಇಲಾಖೆ ಕಚೇರಿಗಳನ್ನು ತುಂಗಭದ್ರಾ ಸ್ಟೀಲ್ ಪ್ರಾಡೆಕ್ಟ್ (ಟಿಎಸ್ಪಿ) ಪ್ರದೇಶದ 83 ಎಕರೆಯಲ್ಲಿ ಹಂಪಿ ವಾಸ್ತುಶಿಲ್ಪ ಮಾದರಿಯಲ್ಲಿಯೇ ನಿರ್ಮಿಸಲು ನೀಲಿನಕ್ಷೆ ಸಿದ್ಧಪಡಿಸಲಾಗುತ್ತಿದೆ ಎಂದು ಮೂಲಸೌಕರ್ಯ, ಹಜ್ ಹಾಗೂ ವಕ್ಫ್ ಸಚಿವ ಆನಂದಸಿಂಗ್ ತಿಳಿಸಿದರು.
ನಗರದ ಟಿಎಸ್ಪಿ ಕಚೇರಿ ಆವರಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇನ್ನೊಂದು ತಿಂಗಳಲ್ಲಿ ವಿಜಯನಗರ ಜಿಲ್ಲೆಗೆ ವಿಶೇಷ ಅಧಿಕಾರಿ ನೇಮಕವಾಗಲಿದ್ದಾರೆ. ನಂತರ ಡಿಸಿ, ಎಸ್ಪಿ, ಸಿಇಒ ಬರಲಿದ್ದು, ಟಿಎಸ್ಪಿ ಹಳೇ ಕಚೇರಿಯಲ್ಲಿ ಕಾರ್ಯಾರಂಭ ಮಾಡಲಿದ್ದು, ಕಟ್ಟಡವನ್ನು ನವೀಕರಿಸಲಾಗುವುದು. ಸಾಯಿಬಾಬಾ ಸರ್ಕಲ್ನಿಂದ ಕಚೇರಿವರೆಗೆ ಬೃಹತ್ ಮರಗಳಿರುವುದರಿಂದ ರಸ್ತೆ ವಿಸ್ತರಣೆ ಮಾಡುವುದಿಲ್ಲ. ಟಿಬಿಡ್ಯಾಂ ವೆಲ್ಕಮ್ ಕಮಾನ್ನಿಂದ ಟಿಬಿಡ್ಯಾಂವರೆಗೆ 11 ಕೋಟಿ ರೂ. ವೆಚ್ಚದಲ್ಲಿ ರಸ್ತೆ ವಿಸ್ತರಣೆ ಮಾಡಲಾಗುವುದು ಎಂದರು.
ಜಿಲ್ಲಾಡಳಿತ ಭವನ ಸೇರಿ ಅಗತ್ಯ ಸೌಕರ್ಯ ಒದಗಿಸಲು ಸರ್ಕಾರಕ್ಕೆ ಆರ್ಥಿಕ ಹೊರೆಯಾಗಲ್ಲ. ಈಗಾಗಲೇ ಸರ್ಕಾರದ ಎಸ್ಪಿಬಿಯಲ್ಲಿ 20 ಸಾವಿರ ಕೋಟಿ ರೂ.ಇದ್ದು, ಜಿಲ್ಲೆಯ ಅಭಿವೃದ್ಧಿಗೆ ಬೇಕಾದ ಹಣವನ್ನು ಸುಪ್ರೀಂ ನಿರ್ದೇಶನದ ಮೇರೆಗೆ ಬಳಸಲಾಗುವುದು. ಹೌಸಿಂಗ್ ಬೋರ್ಡ್ಗೆ ಸೇರಿದ 83 ಎಕರೆ ಪೈಕಿ 42 ಎಕರೆಯನ್ನು 40 ಕೋಟಿ ರೂ.ಪಾವತಿಸಿ ಕಂದಾಯ ವಿಭಾಗಕ್ಕೆ ಪಡೆಯಲಾಗಿದೆ. ಇನ್ನುಳಿದ ಹಣ ಹೌಸಿಂಗ್ ಬೋರ್ಡ್ಗೆ ಪಾವತಿಸಿ ಒಟ್ಟು ಪ್ರದೇಶದಲ್ಲಿ ಕಚೇರಿಗಳನ್ನು ನಿರ್ಮಿಸಲಾಗುವುದು ಎಂದರು. ಇದೇ ವೇಳೆ ನಗರಸಭೆ ಜೆಸಿಬಿಗಳಿಂದ ಟಿಎಸ್ಪಿ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸುವ ಕಾರ್ಯ ಆರಂಭಿಸಲಾಯಿತು.