ಬೆಂಗಳೂರು: ರಾಜ್ಯದ ಗೃಹಮಂತ್ರಿ ಡಾ. ಜಿ ಪರಮೇಶ್ವರ್, ಹಿಂದೂ ಧರ್ಮದ ಹುಟ್ಟಿನ ವಿಚಾರವಾಗಿ ಪ್ರಸ್ತಾಪ ಮಾಡಿ ವಿವಾದದ ಸುಳಿಗೆ ಸಿಲುಕಿದ್ದಾರೆ.
ಇದೀಗ ಈ ವಿವಾದದ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದು ಸ್ಪಷ್ಟನೆ ನೀಡಿದ್ದಾರೆ. ವಿವಾದದ ಕುರಿತಾಗಿ ಗೃಹ ಸಚಿವ ಪರಮೇಶ್ವರ್ ಹೇಳಿಕೆ ನೀಡಿದ್ದು ಮೊದಲಿಗೆ ಬಿಜೆಪಿ ಕಾರ್ಯಕರ್ತರ ಕಿರುಕುಳ ಎಂಬ ದೂರಿನ ವಿಚಾರವಾಗಿ ಮಾತನಾಡಿದರು.
“ನಾವು ಅನಗತ್ಯವಾಗಿ ಯಾರನ್ನೂ ಕೂಡ ಖಾಸಗಿ ಜೀವನದಲ್ಲಿ ಇಂಟರ್ಪೇರ್ ಆಗಲ್ಲ. ಯಾರದರೂ ದೂರು ಕೊಟ್ರೆ ಪೊಲೀಸ್ ಏನ್ ಮಾಡಬೇಕು? ಅವರು ದೂರು ಪರಿಶೀಲನೆ ಮಾಡುತ್ತಾರೆ. ಅದನ್ನೇ ಮಾಡಬೇಡಿ ಅಂದರೆ ಪೊಲೀಸ್ ಯಾಕೆ ಇರಬೇಕು? ಆ ಪಕ್ಷ ಈ ಪಕ್ಷ ಅಂತ ಪೊಲೀಸ್ ನೋಡುವುದಿಲ್ಲ. ಕಾನೂನು ಪ್ರಕಾರ ಕ್ರಮ ಆಗುತ್ತೆ. ನಾವೇ ಯಾರು ಹಿಂದೂ ಧರ್ಮ ಅವಹೇಳನ ಮಾಡಿಲ್ಲ. ನಾವೆಲ್ಲ ಹಿಂದೂಗಳು ಗಣಪತಿ ಜ್ಞಾಪಿಸಿಕೊಳ್ಳುತ್ತೇವೆ. ಯಾರದರೂ ಬಿಜಪಿಗರು ಶ್ಲೋಕ ನಮ್ಮ ತರಹ ಹೇಳ್ತಾರಾ?
ಕೃಷ್ಣ ಹೇಳಿದ್ದನ್ನು ನಾನು ಕಾರ್ಯಕ್ರಮದಲ್ಲಿ ಹೇಳಿದ್ದೆ. ರಾಮಕೃಷ್ಣ ಅವರ ಅಧ್ಯಯನ ಬಗ್ಗೆ ನಾನು ಹೇಳಿದ್ದು. ಯಾವ ಧರ್ಮ ಯಾರು ಸ್ಥಾಪನೆ ಮಾಡಿದ್ದು ಅಂತ ಹೇಳಿದ್ದೆ” ಎಂದು ಸ್ಪಷ್ಟನೆ ನೀಡಿದ್ದಾರೆ. ತಮ್ಮ ಮಾತನ್ನು ಮುಂದುವರೆಸಿ ಅವರು, “ಯಡಿಯೂರಪ್ಪರ ಟ್ವೀಟ್ ನೋಡಿದೆ. ಅವರು ದೊಡ್ಡವರು. ಅವರ ಬಗ್ಗೆ ಮಾತನಾಡಲ್ಲ. ಅವರಿಗೂ ವಿನಾಶ ಕಾಲ ಬಂದಿರಲಿಲ್ವಾ? ವಿವಾದ ಮಾಡುವುದೇ ಬಿಜೆಪಿಗೆ ಅದೆ ಉದ್ಯೋಗವೇ ಆಗಿದೆ. ಕೇಂದ್ರ ಸರ್ಕಾರ ಒಂದೇ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಇದರ ಬಗ್ಗೆ ಬಿಜೆಪಿಗರು ಮಾತನಾಡಲಿ. ಆದರೆ ಅವರು ಮಾತನಾಡಲ್ಲ” ಎಂದು ಕಾಲೆಳೆದಿದ್ದಾರೆ.
ಇದೇ ವೇಳೆ ಅವರು ತಾವು ಭಾಷಣದಲ್ಲಿ ಏನು ಹೇಳಿದ್ದು ಎಂದು ಹೇಳಿದ್ದಾರೆ. “ಹಿಂದೂ ಧರ್ಮ ಯಾವಾಗ ಹುಟ್ಟಿತು ಅಂತ ನಾನು ಪ್ರಶ್ನೆ ಮಾಡಿಲ್ಲ. ಪದೇ ಪದೇ ನಾನು ಅದನ್ನೆ ಹೇಳಲು ಉದ್ಯೋಗ ಅಲ್ಲ. ನಾನು ಹೇಳಿದ್ದು ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಈ ದೇಶದಲ್ಲಿ ಹುಟ್ಟಿದ ಧರ್ಮದ ಬಗ್ಗೆ ಸ್ಟಡಿ ಮಾಡಿದ್ರು. ಅದನ್ನು ನಾನು ಹೇಳಿದ್ದು. ಅವರು ಹೇಳಿದ್ದನ್ನ ನಾನು ಹೇಳಿದ್ದು. ಅವರ ಪ್ರಕಾರ ಜೈನ,ಮುಸ್ಲಿಂ ಧರ್ಮ ಸ್ಥಾಪನೆ ಮಾಡಿದವರು ಇದ್ದರು. ಆದರೆ ಹಿಂದೂ ಧರ್ಮಕ್ಕೆ ಸ್ಥಾಪಕರು ಇಲ್ಲ ಅಂತ ಹೇಳಿದ್ದರು. ಅಷ್ಟು ಹೇಳಿದ್ದಕ್ಕೆ ಬಿಜೆಪಿ ಅವರು ಬೊಬ್ಬೆ ಹೊಡೆಯುತ್ತಿದ್ದಾರೆ. ನಾನೇನು ಅವಹೇಳನಕಾರಿಯಾಗಿ ಮಾತಾಡಿಲ್ಲ. ಹಿಂದೂ ಧರ್ಮದ ಮೇಲೆ ನಮಗೆ ಇರೋ ಗೌರವ ಅವರಿಗೆ ಇದೆಯಾ?” ಎಂದು ಕಿಡಿಕಾರಿದ್ದಾರೆ.