ಮಂಗಳೂರು: ಗೃಹರಕ್ಷಕ ಇಲಾಖೆಯಲ್ಲಿ 1985ರಿಂದ ನಿಷ್ಕಾಮ ಸೇವೆ ಸಲ್ಲಿಸಿರುವ ಅಶೋಕ್ ಕುಮಾರ್ ಸಾರ್ಥಕ್ಯವನ್ನು ಕಂಡಿದ್ದಾರೆ ಎಂದು ಗೃಹರಕ್ಷಕದಳದ ಸಮಾದೇಷ್ಟ ಡಾ.ಮುರಲೀ ಮೋಹನ್ ಚೂಂತಾರು ಹೇಳಿದರು.
ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ವಾರದ ಕವಾಯತಿನ ಸಂದರ್ಭದಲ್ಲಿ ಸೇವಾ ನಿವೃತ್ತಿ ಹೊಂದಿದ ಅಶೋಕ್ ಕುಮಾರ್ ಅವರನ್ನು ಬೀಳ್ಕೊಟ್ಟು ಅವರು ಮಾತನಾಡಿದರು.
ಸೇವಾವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ನಿಷ್ಕಾಮ ಸೇವೆ ಸಲ್ಲಿಸಿರುವ ಅಶೋಕ್ ಪ್ರಾಮಾಣಿಕ, ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಸಂದಿಗ್ದದ ಪರಿಸ್ಥಿತಿಯಲ್ಲೂ ಸಹನೆ ಕಳೆದುಕೊಳ್ಳದೆ ಜನರೊಂದಿಗೆ ಬೆರೆತು ಸಮಾಜದ ಸ್ವಾಸ್ಥೃವನ್ನು ಕಾಪಾಡುವಲ್ಲಿ ಮುತುವರ್ಜಿ ವಹಿಸಿ ಕೆಲಸ ಮಾಡಿದ್ದಾರೆ ಎಂದರು.
ಘಟಕಾಧಿಕಾರಿ ಮಾರ್ಕ್ ಸೆರಾ, ಬೋಧಕ ಎನ್.ಮಹೇಶ ಹಾಗೂ ಗೃಹರಕ್ಷಕರು ಉಪಸ್ಥಿತರಿದ್ದರು.