ಹುಬ್ಬಳ್ಳಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯರಾವ್ನನ್ನು ಮಾನಸಿಕ ಅಸ್ವಸ್ಥ ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಈಗ ಹೇಳಿಕೆ ಬದಲಿಸಿದ್ದಾರೆ.
ಬೊಮ್ಮಾಯಿ ಹೇಳಿಕೆ ವಿರುದ್ಧ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಸಚಿವರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯರಾವ್ ಮಾನಸಿಕ ಅಸ್ವಸ್ಥ ಎಂದು ಹೇಳಿಲ್ಲ. ತನಿಖೆ ನಡೆಯುತ್ತಿದ್ದು ನಂತರ ಸತ್ಯ ತಿಳಯಲಿದೆ ಎಂದು ಮಾತು ಬದಲಿಸಿದರು.
ಬಾಂಬ್ ಇಟ್ಟ ಯುವಕನ ಹಿನ್ನೆಲೆಯ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಲಾಗುತ್ತಿದ್ದಾರೆ. ಬಾಂಬ್ ಸಿಕ್ಕ ತಕ್ಷಣ ತನಿಖೆಗೆ ಮೂರು ತಂಡಗಳನ್ನ ರಚನೆ ಮಾಡಲಾಗಿದೆ. ಆದಿತ್ಯರಾವ್ ಮನೆಯವರು ಹಲವಾರು ವಿಚಾರಗಳನ್ನ ಆತನ ಬಗ್ಗೆ ಹೇಳಿದ್ದಾರೆ. ಆರೋಪಿ ಮಾನಸಿಕ ಅಸ್ವಸ್ಥ ಎಂದು ಎಲ್ಲಿಯೂ ನಾನು ಹೇಳಿಲ್ಲ, ತನಿಖೆ ಆಗದ ಹೊರತು ನಿಖರವಾಗಿ ಏನೂ ಹೇಳುವುದಿಲ್ಲ ಎಂದರು.
ವಿಧಿ ವಿಜ್ಞಾನ ತಜ್ಞರಾದ ಎಚ್ಡಿಕೆ: ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣ ಕುರಿತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ವಿಧಿ ವಿಜ್ಞಾನ ತಜ್ಞರಂತೆ ಮಾತನಾಡುತ್ತಿದ್ದಾರೆ. ಇದು ಸರಿಯಲ್ಲ. ತನಿಖೆಯಿಂದ ಸತ್ಯ ಹೊರ ಬರಬೇಕು. ಸಮಗ್ರ ತನಿಖೆ ನಂತರ ಆರೋಪಿಯೊಂದಿಗೆ ಯಾರು ಇದ್ದಾರೆ ಎನ್ನುವುದು ತಿಳಿಯುತ್ತದೆ ಎಂದರು.
ಪ್ರಕರಣದ ಬಗ್ಗೆ ಎಚ್ಡಿಕೆ ಅವರು ತೀವ್ರ ಗತಿಯಲ್ಲಿ ಹೇಳಿಕೆ ಕೊಡುತ್ತಿದ್ದಾರೆ. ಅಲ್ಪ ಸಂಖ್ಯಾತರನ್ನು ಓಲೈಕೆ ಮಾಡಲು ಅವರು ಕಾಂಗ್ರೆಸ್ ಜೊತೆ ಪೈಪೋಟಿಗೆ ಇಳಿದಿದ್ದಾರೆ. ಹೀಗಾಗಿ ಪೊಲೀಸರ ಕೆಲಸವನ್ನು ಅನುಮಾನದಿಂದ ನೋಡುತ್ತಿದ್ದಾರೆ. ಮಂಗಳೂರಿನಲ್ಲಿರುವ ಪೊಲೀಸರು ಕುಮಾರಸ್ವಾಮಿ ಅವಧಿಯಲ್ಲಿ ನೇಮಕಗೊಂಡವರು ಎಂದು ಸಚಿವರು ಹೇಳಿದರು. (ದಿಗ್ವಿಜಯ ನ್ಯೂಸ್)