ಹೊಳಲ್ಕೆರೆ: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರು, ಅವರಲ್ಲಿ ಶಿಕ್ಷಣ ಜತೆ ವ್ಯವಹಾರಿಕ ಜ್ಞಾನ ಬೆಳೆಸಬೇಕು ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.
ಇಲ್ಲಿನ ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಆಹಾರ ಮೇಳ ಉದ್ಘಾಟಿಸಿ ಮಾತನಾಡಿ, ವೈಜ್ಞಾನಿಕ ಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧೆ ಮಾಡುವುದು ತುಂಬ ಔಚಿತ್ಯ ಎಂದರು.
ಪದವೀಧರರಾದ ತಕ್ಷಣ ಸರ್ಕಾರಿ ನೌಕರಿ ಗಳಿಸಬೇಕು ಎಂಬ ಆಸೆ ಸಹಜ. ಆದರೆ, ಎಲ್ಲ ವಿದ್ಯಾರ್ಥಿಗಳಿಗೂ ನೌಕರಿ ಸಿಗುವುದು ಕಷ್ಟ. ಆದ್ದರಿಂದ ಬೇರೆ ವಿಷಯಗಳಲ್ಲಿ ಕೌಶಲ ಬೆಳೆಸಿಕೊಂಡರೆ ಭವಿಷ್ಯ ಉತ್ತಮವಾಗಿರುತ್ತದೆ. ಕಾಲೇಜಿನಲ್ಲಿ ಈ ಕುರಿತ ತರಬೇತಿ ನೀಡುತ್ತಿರುವುದು ಉತ್ತಮ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಚಾರ್ಯ ಪ್ರೊ.ಸುರೇಶ್ ಮಾತನಾಡಿ, ವಿದ್ಯಾರ್ಥಿಗಳೇ ಸ್ವಯಂ ಜ್ಞಾನದಿಂದ ಆಹಾರ ಮೇಳ ಆಯೋಜಿಸಿರುವುದು ಸಂತೋಷ. ಈ ಮೇಳದಿಂದ ಹಲವು ವಿಚಾರಗಳ ಜ್ಞಾನ ಸಿಗಲಿದೆ ಎಂದು ಹೇಳಿದರು.
ಉಪನ್ಯಾಸಕರಾದ ಪ್ರೊ.ಅಶ್ವತ್ ಯಾದವ್, ಪ್ರೊ.ರಮೇಶ್, ಪ್ರೊ.ಡಾ.ಚೇತನ್, ಪ್ರೊ.ತಿಪ್ಪೇಶಪ್ಪ, ಪ್ರೊ.ಗಿರೀಶ್, ಪ್ರೊ.ಕನಕರಾಜು, ಪ್ರೊ.ದೇವರಾಜು, ಪ್ರೊ.ರಾಜಕುಮಾರ್ ಇತರರಿದ್ದರು.