ಹೊಳಲ್ಕೆರೆ: ಮಕ್ಕಳಲ್ಲಿನ ಪ್ರತಿಭೆ ಅನಾವರಣಗೊಳಿಸುವ ಮೂಲಕ ಸಮಾಜಕ್ಕೆ ಸತ್ಪ್ರಜೆಗಳನ್ನು ಕೊಡುಗೆ ನೀಡುವ ಜವಾಬ್ದಾರಿ ಶಿಕ್ಷಕರು, ಪಾಲಕರ ಮೇಲಿದೆ ಎಂದು ಶಿಕ್ಷಕರ ಸಂಘದ ರಾಜ್ಯ ಸಮಿತಿ ಸದಸ್ಯ ಎನ್.ಶಿವಮೂರ್ತಿ ತಿಳಿಸಿದರು.
ತಾಲೂಕಿನ ತಿರುಮಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಇತ್ತೀಚೆಗೆ ಸ್ಮಾರ್ಟ್ಕ್ಲಾಸ್ಗೆ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಟಿ.ದಿನೇಶ್ ಮಾತನಾಡಿ, ಗ್ರಾಮದ ನಿವಾಸಿಯೂ ಆಗಿರುವ ಎನ್.ಶಿವಮೂರ್ತಿ ಅವರು ತಮ್ಮೂರಿನ ಶಾಲೆಗೆ ಅಗತ್ಯ ಪರಿಕರಗಳನ್ನು ನೀಡಿ ಸ್ಮಾರ್ಟ್ಕ್ಲಾಸ್ ಆರಂಭಕ್ಕೆ ಕಾರಣರಾಗಿರುವುದು ಉತ್ತಮ ಬೆಳವಣಿಗೆ. ಇದೇ ರೀತಿ ಉಳ್ಳವರೆಲ್ಲರೂ ತಮ್ಮ ತಮ್ಮ ಊರಿನ ಶಾಲೆಗಳಿಗೆ ಕೈಲಾದ ಸಹಾಯ ಮಾಡಿದರೆ ಶೈಕ್ಷಣಿಕ ಪ್ರಗತಿ ಸಾಧ್ಯವಾಗುತ್ತದೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಟಿ.ತಿಮ್ಮಪ್ಪ ಮಾತನಾಡಿ, ಗ್ರಾಮ ಶಾಲೆಯಲ್ಲಿ ಕಲಿಕಾ ಪೂರಕ ವಾತಾವರಣದ ಜತೆಗೆ ಉತ್ತಮ ಶಿಕ್ಷಕರಿದ್ದಾರೆ. ಇದೀಗ ಸ್ಮಾರ್ಟ್ಕ್ಲಾಸ್ ಸಹ ಆರಂಭಗೊಂಡಿದೆ. ಇನ್ನು ಮುಂದಿನ ದಿನಗಳಲ್ಲಿ ಮಕ್ಕಳು ಚೆನ್ನಾಗಿ ಅಭ್ಯಾಸ ಮಾಡಿ ಓದಿದ ಶಾಲೆ, ಪಾಲಕರಿಗೆ ಕೀರ್ತಿ ತರಬೇಕು ಎಂದು ತಿಳಿಸಿದರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸರ್ವೇಗಾರ್ ನಾಗೇಂದ್ರಪ್ಪ, ಗ್ರಾಪಂ ಅಧ್ಯಕ್ಷೆ ಸುವರ್ಣಮ್ಮ, ಬಿ.ಟಿ.ಗೋವಿಂದಪ್ಪ, ಮಾಜಿ ಅಧ್ಯಕ್ಷ ಹಾಲೇಶಪ್ಪ, ಸದಸ್ಯ ಕರಿಯಪ್ಪ, ಗ್ರಾಮದ ಹಿರಿಯರಾದ ವಿ.ನಾಗಪ್ಪ, ಡಿ.ಗುರುಮೂರ್ತಿ, ಅರಳಪ್ಪ, ಬಡನಾಗಪ್ಪ, ನಾಗೇಂದ್ರಪ್ಪ, ಅಡಿವಿ ನಾಗಪ್ಪರ ಶಿವಮೂರ್ತಿ, ಮುಖ್ಯಶಿಕ್ಷಕಿ ಉಷಾದೇವಿ, ಶಿಕ್ಷಕರಾದ ನೀಲಾಂಬಿಕೆ, ಶಿವಕುಮಾರಯ್ಯ ಉಪಸ್ಥಿತರಿದ್ದರು.