ಹಿರಿಯೂರು: ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮತ್ತು ಕುಡಿವ ನೀರಿಗೆ ರಾಜ್ಯ ಸರ್ಕಾರ ಅಗತ್ಯ ಅನುದಾನ ನೀಡಿದ್ದು, ಜನ-ಜಾನುವಾರುಗಳ ಕುಡಿವ ನೀರಿಗೆ ತೊಂದರೆಯಾದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಶಾಸಕಿ ಕೆ.ಪೂರ್ಣಿಮಾ ಎಚ್ಚರಿಸಿದರು.
ತಾಲೂಕಿನ ಈಶ್ವರಗೆರೆ, ನಂದಿಹಳ್ಳಿ, ಪಿಲಾಲಿ ಹಾಗೂ ಮುಂದಲಹಟ್ಟಿ ಗ್ರಾಮದಲ್ಲಿ 1.10 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ತಾಲೂಕಿನ ಕೆಲವೆಡೆ ಅಂತರ್ಜಲ ಕುಸಿತದಿಂದ ಕೊಳವೆ ಬಾವಿ ವಿಫಲವಾಗಿದ್ದು, ಲಭ್ಯವಿರುವ ಜಲ ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡು ಕುಡಿವ ನೀರು ಪೂರೈಕೆ ಮಾಡಲು ಸ್ಥಳೀಯ ಅಧಿಕಾರಿಗಳು, ಸಿಬ್ಬಂದಿ ಗಮನಹರಿಸ ಬೇಕು ಎಂದರು.
ತಾಲೂಕಿನ ಪ್ರತಿ ಗ್ರಾಮಗಳಿಗೂ ಶುದ್ಧ ಕುಡಿವ ನೀರಿನ ಘಟಕ, ರಸ್ತೆ ಅಭಿವೃದ್ಧಿ, ಸಮುದಾಯ ಭವನ, ಸುಸಜ್ಜಿತ ಚರಂಡಿ, ವಿದ್ಯುತ್ ದೀಪ, ದೇವಸ್ಥಾನಗಳ ಜೀರ್ಣೋದ್ಧಾರ ಸೇರಿ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಲಾಗಿದೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ಪರಮೇಶ್, ಸದಸ್ಯರಾದ ದೇವರಾಜ್, ಕೃಷ್ಣಪ್ಪ, ಮಂಜುನಾಥ್, ಮುಖಂಡರಾದ ವೀರಭದ್ರಪ್ಪ, ರಂಗಸ್ವಾಮಿ, ಪಾಂಡುರಂಗ, ಶ್ರೀಧರ್, ನಿರಂಜನಮೂರ್ತಿ ಇತರರಿದ್ದರು.