ಹಿರಿಯೂರು: ಅಜ್ಞಾನ ಅಳಿಸಿ, ಜ್ಞಾನದ ಬೆಳಕು ನೀಡುವ ಗುರುವನ್ನು ಸ್ಮರಿಸುವುದು ಪುಣ್ಯದ ಕೆಲಸ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಶಶಿಕಲಾ ಸುರೇಶ್ಬಾಬು ಹೇಳಿದರು.
ಶನಿವಾರ ತಾಲೂಕಿನ ಜಡೇಗೊಂಡನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಶಾಲೆ ಉಳಿಸಿ-ಬೆಳೆಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಗ್ರಾಮೀಣರು ಸರ್ಕಾರಿ ಶಾಲೆಗಳ ಮಾಲೀಕರು. ಇಲ್ಲಿನ ಶಾಲೆಯನ್ನು ಶಾಂತಿನಿಕೇತನದ ಮಾದರಿಯಲ್ಲಿ ಅಭಿವೃದ್ಧಿಪಡಿಸಿರುವುದು ಶ್ಲಾಘನೀಯ ಎಂದರು.
ತಾಪಂ ಸದಸ್ಯ ಕೆ. ಶಂಕರಮೂರ್ತಿ ಮಾತನಾಡಿ, ಪಾಲಕರ ಖಾಸಗಿ ಶಾಲೆ ವ್ಯಾಮೋಹದಿಂದ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿರುವ ಸಂದರ್ಭದಲ್ಲಿ, ಇಲ್ಲಿನ ಶಿಕ್ಷಕರು ಪರಿಶ್ರಮಪಟ್ಟು ಸ್ಮಾರ್ಟ್ ಶಾಲೆಯಾಗಿ ಅಭಿವೃದ್ಧಿ ಪಡಿಸಿರುವುದು ಇತರರಿಗೆ ಸ್ಫೂರ್ತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೆಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ ರಂಗನಾಥ್, ಮೇಘನಾ ಹಾಗೂ ನಿವೃತ್ತ ಶಿಕ್ಷಕರು, ಹಿರಿಯ ನಾಗರಿಕರನ್ನು ಗೌರವಿಸಲಾಯಿತು.
ಗ್ರಾಪಂ ಸದಸ್ಯರಾದ ತಿಪ್ಪೇಸ್ವಾಮಿ, ಜಯಮ್ಮ, ಮಂಜು, ಮಾಜಿ ಅಧ್ಯಕ್ಷ ರಾಮಕೃಷ್ಣಪ್ಪ, ಕೃಷ್ಣಮೂರ್ತಿ, ಮುರಳಿ, ಎಸ್ಡಿಎಂಸಿ ಅಧ್ಯಕ್ಷ ಬಸವರಾಜ್, ಉಪಾಧ್ಯಕ್ಷ ದಿನೇಶ್, ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತರೆಡ್ಡಿ, ಶಿಕ್ಷಕರಾದ ಶ್ರೀಧರ್, ರಮೇಶ್ ನಾಯಕ್, ಶುಭಾ ಇತರರಿದ್ದರು.