More

    ಬಿಜೆಪಿಗೆ ಯು.ಬಿ.ಬಣಕಾರ ಗುಡ್ ಬೈ; ಉಗ್ರಾಣ ನಿಗಮ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೂ ರಾಜೀನಾಮೆ

    ಹಿರೇಕೆರೂರ/ ಹಾವೇರಿ: ಬಿಜೆಪಿಯ ಕಟ್ಟಾಳು, ಹಿರೇಕೆರೂರ ಕ್ಷೇತ್ರದ ಮಾಜಿ ಶಾಸಕ ಯು.ಬಿ. ಬಣಕಾರ ಅವರು ಬಿಜೆಪಿ ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದಲ್ಲದೇ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗದ ನಿರ್ದೇಶಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಈ ವಿಚಾರ ಈಗ ಜಿಲ್ಲೆಯ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
    ಈ ಕುರಿತು ಭಾವನಾತ್ಮಕ ಪತ್ರ ಬರೆದಿರುವ ಯು.ಬಿ.ಬಣಕಾರ ಅವರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ.
    ‘ನನ್ನ ತಂದೆಯವರ ಕಾಲದಿಂದಲೂ ಸುಮಾರು 38 ವರ್ಷಗಳಿಂದಲೂ ಸಾರ್ವಜನಿಕ ಜೀವನದಲ್ಲಿ ನಾವು ತೆಗೆದುಕೊಂಡ ಎಲ್ಲ ನಿರ್ಧಾರಗಳನ್ನು ನೀವು ಗೌರವಿಸಿದ್ದೀರಿ. ಕೆಲ ನಿರ್ಣಯಗಳು ಪ್ರಾರಂಭದಲ್ಲಿ ಸರಿ ಎನಿಸದಿದ್ದರೂ ಕೊನೆಯಲ್ಲಿ ಒಪ್ಪಿಕೊಂಡಿದ್ದೀರಿ. ನಿಮ್ಮ ಅಭಿಮಾನವೇ ನಮ್ಮ ಸಂಪತ್ತು. ಅಧಿಕಾರ ದೊಡ್ಡದಲ್ಲ ಮತ್ತು ಶಾಶ್ವತವಲ್ಲ ಎಂದು ನಂಬಿದವನು ನಾನು. ನಾವೆಲ್ಲ ಒಂದೇ ಕುಟುಂಬ ಎಂದು ನಂಬಿಕೊಂಡು ಬಂದವರು ನಾವು. ಅಧಿಕಾರ ಇದ್ದಾಗಲೂ, ಇಲ್ಲದಿದ್ದಾಗಲೂ ಎಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಬಂದಿದ್ದೇವೆ. ಸಹಸ್ರಾರು ಜನ ನಮ್ಮ ನಿರ್ಧಾರ ಗೌರವಿಸುವ ಸಂದರ್ಭದಲ್ಲಿ ಕೆಲವರ ಟೀಕೆಗಳು ನಮಗೆ ಪ್ರಸ್ತುತವಲ್ಲ’.
    ‘ನಿಮ್ಮೆಲ್ಲರ ನೋವು, ಸಲಹೆ, ಮಾರ್ಗದರ್ಶನದ ಅಡಿಯಲ್ಲಿ ಮತ್ತೊಮ್ಮೆ ನಿರ್ಧಾರ ತೆಗೆದುಕೊಳ್ಳುವ ಕಾಲ ಕೂಡಿ ಬಂದಿದೆ. ನಾನು ಈ ದಿವಸ ಭಾರತೀಯ ಜನತಾ ಪಕ್ಷದ ಸದಸ್ಯತ್ವಕ್ಕೆ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಹಾಗೂ ವೀರಶೈವ- ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಇದರಿಂದ ಯಾರಿಗಾದರೂ ಅಸಂತೋಷ, ಬೇಸರ ಆದರೆ ದಯವಿಟ್ಟು ನನ್ನನ್ನು ಕ್ಷಮಿಸಿ. ತಮ್ಮೆಲ್ಲರ ಸಹಕಾರ ಸದಾ ಇರಲಿ ಎಂದು ವಿನಯಪೂರ್ವಕವಾಗಿ ಕೇಳಿಕೊಳ್ಳುತ್ತೇನೆ’ ಎಂದು ಪತ್ರದಲ್ಲಿ ಬರೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts