ಮುಂಬೈ : ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಅವರ ವಿರುದ್ಧ ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಮಾಡಿರುವ ಭ್ರಷ್ಟಾಚಾರದ ಆರೋಪದ ಬಗ್ಗೆ ‘ಪ್ರಾಥಮಿಕ ತನಿಖೆ’ ನಡೆಸುವಂತೆ ಬಾಂಬೆ ಹೈಕೋರ್ಟ್ ಸಿಬಿಐಗೆ ಆದೇಶಿಸಿದೆ. ಕೇಂದ್ರ ತನಿಖಾ ದಳ(ಸಿಬಿಐ)ದ ನಿರ್ದೇಶಕರಿಗೆ ಕಾನೂನುರೀತ್ಯ 15 ದಿನಗಳೊಳಗೆ ತನಿಖೆ ಪೂರ್ಣಗೊಳಿಸಲು ನಿರ್ದೇಶನ ನೀಡಿದ ನ್ಯಾಯಾಲಯವು, ತದನಂತರ ಅವರಿಗೆ ಸೂಕ್ತವೆನಿಸಿದ ಕ್ರಮ ಕೈಗೊಳ್ಳುವ ಸ್ವಾತಂತ್ರ್ಯವಿದೆ ಎಂದಿದೆ.
ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಅವರ ವಿರುದ್ಧ ಸಿಬಿಐ ತನಿಖೆ ನಡೆಸಬೇಕೆಂದು ಕೋರಿರುವ ಪರಮ್ ಬೀರ್ ಸಿಂಗ್ ಅವರ ಕ್ರಿಮಿನಲ್ ಪಿಐಎಲ್ ಜೊತೆಗೆ, ಸ್ವತಂತ್ರ ತನಿಖೆ ಕೋರಿರುವ ಮುಂಬೈನ ವಕೀಲರಾದ ಜಯಶ್ರೀ ಪಾಟೀಲ್ ಮತ್ತು ಶಿಕ್ಷಕರಾದ ಮೋಹನ್ ಭಿಡೆ ಎಂಬುವರ ಮತ್ತೆರಡು ಪಿಐಎಲ್ಗಳ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ಹೊರಡಿಸಿದೆ. ಜಯಶ್ರೀ ಪಾಟೀಲ್ ಅವರು ನಗರದ ಮಲಾಬಾರ್ ಹಿಲ್ ಪೊಲೀಸ್ ಠಾಣೆಯಲ್ಲಿ ದೇಶಮುಖ್, ಸಿಂಗ್ ಮತ್ತು ಇತರರ ಮೇಲೆ ಭ್ರಷ್ಟಾಚಾರದ ದೂರು ದಾಖಲಿಸಿದ್ದು, ಆ ಮೇರೆಗೆ ಎಫ್.ಐ.ಆರ್. ದಾಖಲಿಸಲೂ ಕೋರ್ಟ್ ನಿರ್ದೇಶನ ಕೋರಿದ್ದರು.
ಇದನ್ನೂ ಓದಿ: ಸಿಎಂ ಬಿಎಸ್ವೈಗೆ ಬಿಗ್ ರಿಲೀಫ್ ನೀಡಿದ ಸುಪ್ರೀಂಕೋರ್ಟ್
ಪರಮ್ ಬೀರ್ ಸಿಂಗ್ ಅವರು, ತಮ್ಮನ್ನು ಮುಂಬೈ ಪೊಲೀಸ್ ಆಯುಕ್ತರ ಹುದ್ದೆಯಿಂದ ತೆಗೆದುಹಾಕಿ ಗೃಹರಕ್ಷಕ ದಳಕ್ಕೆ ವರ್ಗಾವಣೆ ಮಾಡಿದ ಮೂರು ದಿನಗಳ ನಂತರ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಎಂಟು ಪುಟಗಳ ಪತ್ರವನ್ನು ಬರೆದಿದ್ದರು. ಇದರಲ್ಲಿ ಬಂಧನಕ್ಕೊಳಗಾಗಿರುವ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಸಚಿನ್ ವಾಜ್ ಅವರಿಗೆ ಮತ್ತು ಇತರ ಪೊಲೀಸ್ ಅಧಿಕಾರಿಗಳಿಗೆ ಮುಂಬೈನ ಬಾರ್ ಮತ್ತು ರೆಸ್ಟೊರೆಂಟ್ಗಳಿಂದ ಪ್ರತಿ ತಿಂಗಳು 100 ಕೋಟಿ ರೂ.ಗಳನ್ನು ಸಂಗ್ರಹಿಸಲು ದೇಶಮುಖ್ ಸೂಚಿಸಿದ್ದರು ಎಂದು ಸಿಂಗ್ ಆರೋಪಿಸಿದ್ದರು. ಜೊತೆಯಲ್ಲೇ ಪೊಲೀಸ್ ವರ್ಗಾವಣೆ ಮತ್ತು ಪೋಸ್ಟಿಂಗ್ಗಳಲ್ಲಿ ಭ್ರಷ್ಟಾಚಾರ ಮತ್ತು ತನಿಖೆಗಳಲ್ಲಿ ರಾಜಕೀಯ ಹಸ್ತಕ್ಷೇಪವೂ ನಡೆಯುತ್ತಿದೆ ಎಂದಿದ್ದರು.
ಮೂರೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಗಿರೀಶ್ ಎಸ್. ಕುಲಕರ್ಣಿ ಅವರ ವಿಭಾಗೀಯ ಪೀಠವು, ಈ ಪ್ರಕರಣ ಅಸಾಮಾನ್ಯವಾದುದು ಮತ್ತು ಈ ಹಿಂದೆ ಪರಿಗಣೆನೆಗೆ ಬಂದಿಲ್ಲದಂತಹುದು ಎಂದು ಅಭಿಪ್ರಾಯಪಟ್ಟಿತು. “ನಿಜಾಂಶವನ್ನು ಹೊರಗೆಳೆಯಲು ಸ್ವತಂತ್ರ ತನಿಖೆಯ ಅಗತ್ಯವಿದೆ. ಅನಿಲ್ ದೇಶಮುಖ್ ಅವರು ರಾಜ್ಯದ ಗೃಹ ಸಚಿವರಾಗಿರುವುದರಿಂದ ಈ ವಿಚಾರವಾಗಿ ಪೊಲೀಸರಿಂದ ನಿಷ್ಪಕ್ಷಪಾತವಾದ ತನಿಖೆ ನಡೆಯಲು ಸಾಧ್ಯವಿಲ್ಲ. ಆದ್ದರಿಂದ ಸಿಬಿಐ ನಿರ್ದೇಶಕರಿಗೆ ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಲು ಅವಕಾಶ ನೀಡುವುದು ನ್ಯಾಯಪರವಾಗುತ್ತದೆ” ಎಂದು ನ್ಯಾಯಮೂರ್ತಿಗಳು ಹೇಳಿದರು. (ಏಜೆನ್ಸೀಸ್)
ಕಾಂಗ್ರೆಸ್ ಕಾರ್ಯಕರ್ತನ ಮೇಲೆ ‘ರೇಪ್ ಕೇಸ್’ ! ಮಹಿಳೆಗೆ ದಂಡ ವಿಧಿಸಿದ ಹೈಕೋರ್ಟ್